ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲಕ್ಕೆ ದಾರಿ ತೋರಿದ ವೇಮನ

ವೇಮನ ಜಯಂತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಕಿವಿಮಾತು
Last Updated 19 ಜನವರಿ 2021, 12:59 IST
ಅಕ್ಷರ ಗಾತ್ರ

ಕೋಲಾರ: ‘ಮನುಕುಲಕ್ಕೆ ದಾರಿ ತೋರಿದ ದಾರ್ಶನಿಕರನ್ನು ಜಾತಿಯ ಸಂಕೋಲೆಗೆ ಸೀಮಿತಗೊಳಿಸದೆ ವಿಶ್ವಮಾನವರಾಗಿ ನೋಡಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಕಿವಿಮಾತು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿಯಲ್ಲಿ ಮಾತನಾಡಿ, ‘ಮಹಾಯೋಗಿ ವೇಮನರ ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕಷ್ಟೇ ಸೀಮಿತವಾಗದೆ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದಾರೆ’ ಎಂದು ಸ್ಮರಿಸಿದರು.

‘ವಾಲ್ಮೀಕಿ, ತಾತಯ್ಯ, ಬಸವಣ್ಣ ಅವರು ವೇಮನರ ಆಶಯಗಳಿಂದ ಪ್ರಭಾವಿತರಾಗಿ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡರು. ದೇಶದ ಸಂವಿಧಾನದಲ್ಲೂ ವೇಮನರ ಆಶಯಗಳು ಅಡಗಿವೆ. ಸಮಾಜದ ಅಭಿವೃದ್ಧಿಗೆ ಪೂರಕವಾಗಿ ಮಾರ್ಗದರ್ಶನ ನೀಡಿರುವ ಮಹನೀಯರ ಜಯಂತಿ ಆಚರಿಸುವುದರ ಜತೆಗೆ ಅವರ ತತ್ವಾದರ್ಶದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

‘ವೇಮನರು ತೆಲುಗು ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ವಚನ, ಪದ್ಯಗಳು ಹಲವು ಭಾಷೆಗೆ ಅನುವಾದಗೊಂಡಿವೆ. ಕನ್ನಡದ ಸರ್ವಜ್ಞ ಕವಿಯ ಹಾದಿಯಲ್ಲಿ ವೇಮನ ಕವಿಯನ್ನು ಕಾಣಬೇಕು. ಸರಳ ಭಾಷೆಯಲ್ಲಿ ನುಡಿಗಟ್ಟುಗಳನ್ನು ರಚಿಸಿ ಜನರಿಗೆ ಮನವರಿಕೆ ಮಾಡಿಕೊಡುತ್ತಾ ಸಮಾಜ ಸುಧಾರಣೆಗೆ ಶ್ರಮಿಸಿದ ಇವರ ತತ್ವಾದರ್ಶ ಪಾಲಿಸಬೇಕು’ ಎಂದು ತಿಳಿಸಿದರು.‌

‘17ನೇ ಶತಮಾನದಲ್ಲಿ ಜೀವಿಸಿದ್ದ ವೇಮನರು ತತ್ವಜ್ಞಾನಿ, ದಾರ್ಶನಿಕರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಲೌಕಿಕ ಬದುಕಿನ ಅರಿವಾಗಿ ಭೋಗ ಜೀವನ ತ್ಯಜಿಸಿದ ವೇಮನರು ಪಾರಮಾರ್ಥಿಕ ಹಾದಿಯಲ್ಲಿ ಸಾಗಿ ಮಹಾ ಯೋಗಿ ಎನಿಸಿಕೊಂಡರು. ಅವರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ’ ಎಂದು ಬಣ್ಣಿಸಿದರು.

ಆರೋಗ್ಯಕರ ಸಮಾಜ: ‘ಮನುಷ್ಯರಲ್ಲಿ ಸ್ವಾರ್ಥ, ಅಸಮಾನತೆ, ಕೀಳರಿಮೆ ಗುಣಗಳನ್ನು ಮನಗಂಡು ಅವುಗಳನ್ನು ಹೋಗಲಾಡಿಸಿ ಉತ್ತಮ ಸಮಾಜ ರೂಪಿಸಲು ವೇಮನರ ವಿಚಾರಗಳು ಪೂರಕವಾಗಿವೆ’ ಎಂದು ಕೆ.ಸಿ ರೆಡ್ಡಿ ಟ್ರಸ್ಟ್ ಅಧ್ಯಕ್ಷೆ ವಸಂತ ಕವಿತಾರೆಡ್ಡಿ ಅಭಿಪ್ರಾಯಪಟ್ಟರು.

‘ಮಹಿಳೆಯರು ಸಾಮಾಜಿಕ ಬದಲಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಬದಲಾವಣೆ ಜಗದ ನಿಯಮ. ಭೋಗ ಜೀವನ ನಡೆಸುತ್ತಿದ್ದ ವೇಮನರು ಹೇಮಾರೆಡ್ಡಿ ಮಲ್ಲಮ್ಮನಿಂದ ಪರಿವರ್ತನೆಗೊಂಡು ಸಮಾಜ ಸುಧಾರಕರಾದರು. ವೇಮನರ ಸಂದೇಶವನ್ನು ಹಳ್ಳಿ ಹಳ್ಳಿಗೆ, ಮನೆ ಮನೆಗೆ ತಲುಪಿಸುವ ಮೂಲಕ ಆರೋಗ್ಯಕರ ಸಮಾಜ ಕಟ್ಟೋಣ’ ಎಂದು ಹೇಳಿದರು.

2 ಸಾವಿರ ಪದ್ಯ: ಉಪನ್ಯಾಸ ನೀಡಿದ ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ, ‘ದೇಶದಲ್ಲಿ ನಾನಾ ಧರ್ಮಗಳಿವೆ. ಹಿಂದೂ ಧರ್ಮದಲ್ಲೂ ನಾನಾ ಜಾತಿಗಳಿದ್ದರೂ ಪ್ರತಿ ಜಾತಿಯಲ್ಲೂ ದಾರ್ಶನಿಕರು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ವೇಮನರು ಸುಮಾರು 2 ಸಾವಿರ ಪದ್ಯ ರಚಿಸಿದ್ದು, ಅವುಗಳಲ್ಲಿ 600 ಪದ್ಯಗಳು ಕನ್ನಡಕ್ಕೆ ಅನುವಾದವಾಗಿವೆ’ ಎಂದು ವಿವರಿಸಿದರು.

ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾರಾಯಣರೆಡ್ಡಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT