ಹೈಕಮಾಂಡ್ ಕೂಡ ಅಪ್ಪನ ಇಚ್ಛೆಗೆ ವಿರುದ್ಧವಾಗಿ ಹೋಗಲ್ಲ: ಯತೀಂದ್ರ ಸಿದ್ದರಾಮಯ್ಯ

ಕೋಲಾರ: ‘ಹೈಕಮಾಂಡ್ ಒಪ್ಪಿದರೆ ನನ್ನ ತಂದೆ ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸುತ್ತಾರೆ. ಹೈಕಮಾಂಡ್ ಕೂಡ ಅವರ ಇಚ್ಛೆಗೆ ವಿರುದ್ಧವಾಗಿ ಹೋಗಲ್ಲ’ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸಿದ್ದರಾಮಯ್ಯ ಅವರ ವಾಸ್ತವ್ಯಕ್ಕೆ ಬಸವನತ್ತದಲ್ಲಿ ಗುರುತಿಸಿರುವ ಬಾಡಿಗೆ ಮನೆಯನ್ನು ಪರಿಶೀಲಿಸಲು ಸೋಮವಾರ ನಗರಕ್ಕೆ ಬಂದಿದ್ದ ಅವರು ಕೆಲವು ಗ್ರಾಮಗಳಲ್ಲಿ ತಂದೆಯ ಪರ ಪ್ರಚಾರವನ್ನೂ ಆರಂಭಿಸಿದರು.
‘ಮನೆ ಚೆನ್ನಾಗಿದೆ. ನನ್ನ ತಂದೆಯೂ ಒಮ್ಮೆ ನೋಡಿ ತೀರ್ಮಾನಿಸಲಿದ್ದಾರೆ. ವಾಸ್ತು ಮೇಲೆ ನಮಗೆ ನಂಬಿಕೆ ಇಲ್ಲ’ ಎಂದು ಅವರು ಹೇಳಿದರು.
‘ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ತಂದೆಗೆ ಹೇಳಿದ್ದೇನೆ. ಆದರೆ, ಕೋಲಾರದಿಂದ ಸ್ಪರ್ಧಿಸಬೇಕು, ಅದಕ್ಕೆ ಹೈಕಮಾಂಡ್ ಒಪ್ಪಬೇಕು ಎನ್ನುವ ಮನಸ್ಸು ಅವರಿಗಿದೆ’ ಎಂದರು.
ಅಲ್ಪಸಂಖ್ಯಾತರ ಸಭೆಯಲ್ಲಿ ಮಾತನಾಡಿದ ಅವರು, 'ಸಿದ್ದರಾಮಯ್ಯ ಅವರನ್ನು ತುಳಿಯಲು ಎಲ್ಲಾ ಶಕ್ತಿಗಳು ಪ್ರಯತ್ನಿಸುತ್ತಿವೆ. ಮುಸ್ಲಿಮರು ಜೆಡಿಎಸ್ ಬೆಂಬಲಿಸಿದರೆ ಅವರು ಕೋಮುವಾದಿ ಬಿಜೆಪಿ ಜೊತೆ ಕೈಜೋಡಿಸುತ್ತಾರೆ’ ಎಂದು ಎಚ್ಚರಿಸಿದರು.
ಕೆ.ಎಚ್.ಮುನಿಯಪ್ಪ ಬಣದ ಮುಖಂಡರು ಗೈರಾಗಿದ್ದರು. ಕೆ.ಆರ್.ರಮೇಶ್ ಕುಮಾರ್ ಬೆಂಬಲಿಗರು ಯತೀಂದ್ರ ಅವರ ಜೊತೆಗಿದ್ದರು.
ವರುಣಾ ಹೆಚ್ಚು ಸುರಕ್ಷಿತ: ರಾಜಣ್ಣ
‘ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಲ್ಲೇ ಸ್ಪರ್ಧಿಸುವುದು ಹೆಚ್ಚು ಸುರಕ್ಷಿತ ಎಂಬುದು ನನ್ನ ಭಾವನೆ. ಅಲ್ಲೇ ಸ್ಪರ್ಧಿಸುವಂತೆ ಮನವಿ ಮಾಡುತ್ತೇನೆ. ಮಧುಗಿರಿಯಿಂದ ಸ್ಪರ್ಧಿಸುವಂತೆ ಮೊದಲಿನಿಂದಲೂ ಮನವಿ ಮಾಡುತ್ತಲೇ ಇದ್ದೇನೆ’ ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ತುಮಕೂರಲ್ಲಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.