ಮುಂಗಾರು ನಿಗದಿತ ಸಮಯಕ್ಕೆ ಬಾರದ ಕಾರಣ ಈ ಬಾರಿ ಮಳೆಯ ಕೊರತೆ ಎದುರಾಗಿತ್ತು. ಆಗಸ್ಟ್ನಲ್ಲಂತೂ ವಾಡಿಕೆಗಿಂತಲೂ ಕಡಿಮೆ ಮಳೆ ಬಂದಿದ್ದರಿಂದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಹಿಂದಿನ ಒಂದು ವಾರದ ಅವಧಿಯಲ್ಲಿ ಎರಡು ಬಾರಿ ಜೋರಾಗಿ ಸುರಿದ ಮಳೆ ರೈತರ ಆತಂಕವನ್ನು ದೂರ ಮಾಡಲು ಸಹಕಾರಿಯಾಗಲಿದೆ. ಬಹಳಷ್ಟು ರೈತರು ಈಗ ಮೆಕ್ಕೆಜೋಳದ ಫಸಲು ಎದುರು ನೋಡುತ್ತಿದ್ದಾರೆ.
ಪರದಾಟ: ಮಳೆ ರೈತರಲ್ಲಿ ಸಡಗರಕ್ಕೆ ಕಾರಣವಾದರೆ ನಗರದಲ್ಲಿನ ಅವ್ಯವಸ್ಥೆ ಪಾದಚಾರಿಗಳು ಹಾಗೂ ದ್ವಿಚಕ್ರವಾಹನಗಳ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿನ ರಸ್ತೆ ಕತ್ತಲಮಯವಾಗಿತ್ತು. ಅಲ್ಲಿ ರಸ್ತೆ ನಿರ್ಮಾಣ ಹಂತದಲ್ಲಿದ್ದು, ಎರಡು ರಸ್ತೆಗಳ ನಡುವೆ ವಿಜಭಕ ಬಿಡಲಾಗಿದೆ. ವಿಭಜಕದ ಜಾಗದಲ್ಲಿ ದೊಡ್ಡದಾಗಿ ಖಾಲಿ ಜಾಗ ಬಿಡಲಾಗಿದ್ದು, ಅಲ್ಲಿ ಕಾರು ಸಿಲುಕಿಕೊಂಡಿತ್ತು.
ಒಂದೆಡೆ ಮಳೆ, ಇನ್ನೊಂದೆಡೆ ಕಾರ್ಗತ್ತಲು ನಡುವೆ ಸ್ಥಳದಲ್ಲಿದ್ದ ಕೆಲವರು ಕಾರು ವಿಭಜಕ ಜಾಗದ ಗುಂಡಿಯಿಂದ ಮೇಲೆತ್ತಲು ಪ್ರಯಾಸ ಪಟ್ಟರು. ಸೋರುತ್ತಿದ್ದ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತುಕೊಂಡಿತ್ತು. ರಸ್ತೆ ಬದಿಯ ವ್ಯಾಪಾರಿಗಳು, ಅಂಗಡಿ ಮತ್ತು ನಿತ್ಯದ ಕೆಲಸಗಳನ್ನು ಮುಗಿಸಿಕೊಂಡು ಹೋಗುವವರು ಮಳೆಗೆ ಸಿಲುಕಿ ಪರದಾಡಿದರು. ಜವಾಹರ ರಸ್ತೆ, ಲೇಬರ್ ಸರ್ಕಲ್, ಬಸ್ ನಿಲ್ದಾಣ, ಗಡಿಯಾರ ಕಂಬ ಹೀಗೆ ವಿವಿಧೆಡೆ ಜನ ಮಳೆಯಲ್ಲಿ ಸಿಲುಕಿಕೊಂಡರು.