ಹನುಮಸಾಗರ: ವಾರದಲ್ಲಿ ಎರಡು ಬಾರಿ ಅಲ್ಪ ಪ್ರಮಾಣದ ಮಳೆಯಾಗಿದೆ. ಕೃಷಿ ಹೊಂಡಕ್ಕೆ ನೀರು ಬಂದಿದೆ. ಜಾನುವಾರುಗಳಿಗೆ ಅನುಕೂಲವಾಗಿದೆ.
ಹನುಮಸಾಗರ, ಹನುಮನಾಳ, ಹೂಲಗೇರಿ, ಗೊಣ್ಣಾಗರ ಹಾಗೂ ನಿಲೋಗಲ್ ಭಾಗದಲ್ಲಿ ಮೂರು ಬಾರಿ ಅಲ್ಪ ಪ್ರಮಾಣದ ಮಳೆಯಾಗಿದೆ.
ಕೃಷಿ ಇಲಾಖೆ ವತಿಯಿಂದ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅಡಿ ಜಮೀನಿನಲ್ಲಿ ನಿರ್ಮಾಣ ಮಾಡಲಾಗಿರುವ ಕಟ್ಟೆಗಳಲ್ಲಿ ನೀರು ನಿಂತಿದೆ. ಇದು ಇತರ ಜಲಮೂಲಗಳ ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ.
ಜಲಾಯನ ಅಭಿವೃದ್ಧಿ ಇಲಾಖೆಯವರು ಕೆಲ ಗ್ರಾಮಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿದ್ದಾರೆ. ಅದರ ಮುಂಭಾಗದಲ್ಲಿ ನೀರು ಸಂಗ್ರಹಕ್ಕೆ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ನೀರು ಇಂಗುತ್ತಿದೆ.
ಕೃಷಿ ಚಟುವಟಿಕೆಗಳು ವೇಗ ಪಡೆದಿವೆ. ಜಮೀನುಗಳಲ್ಲಿ ಮಡಿಕೆ, ಕುಂಟೆ ಹೊಡೆದು, ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿಯನ್ನು ಹದ ಮಾಡಲಾಗುತ್ತಿದೆ.
‘ಜಲಾಯನ ಅಭಿವೃದ್ಧಿ ಇಲಾಖೆಯಿಂದ ಕೆಲ ಹಳ್ಳಗಳಲ್ಲಿ ಇಂಥ ಕಟ್ಟೆಗಳನ್ನು ನಿರ್ಮಾಣ ಮಾಡಲಾಗಿದೆ. ಸಾಮಾನ್ಯವಾಗಿ ಚೆಕ್ ಡ್ಯಾಂ ಇರುವ ಪ್ರತಿಯೊಂದು ಹಳ್ಳಗಳಲ್ಲೂ ಕಟ್ಟೆಗಳನ್ನು ನಿರ್ಮಿಸಿದರೆ, ಹೆಚ್ಚಿನ ಪ್ರಮಾಣದಲ್ಲಿ ನೀರು ಇಂಗಿ ಸುತ್ತಲಿನ ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ’ ಎಂದು ಹನುಮಸಾಗರದ ಸಂಗಪ್ಪ ಗೌಡ್ರ, ನಿಂಗನಗೌಡ ಮದ್ನಾಳ ಹಾಗೂ ಶರಣಬಸವ ಪಾಟೀಲ ಹೇಳಿದರು.
‘ಈ ಬಾರಿ ಮಳೆ ಆಶಾಭಾವನೆ ಮೂಡಿಸಿದೆ. ಹೊಲ ಸಿದ್ಧವಾಗಿಸಿಕೊಂಡು, ಹೆಸರು ಬೀಜ ಸಂಗ್ರಹಿಸಿಕೊಂಡು ಬಿತ್ತನೆಗೆ ಕಾಯುತ್ತಿದ್ದೇವೆ’ ಎಂದು ಬೆನಕನಾಳ ಗ್ರಾಮದ ಸಂಗಪ್ಪ ಭಾವಿಕಟ್ಟಿ ಹೇಳಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಮಾಹಿತಿ ನೀಡಿ,‘ಹೆಸರು, ಸಜ್ಜೆ, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳದ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಸರಿಯಾದ ಸಮಯಕ್ಕೆ ಬೀಜ ಪೂರೈಕೆಯಾಗುತ್ತದೆ. ಸದ್ಯ ರೈತರು ಭೂಮಿ ತಯಾರಿ ಮಾಡಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.