ಕನಕಗಿರಿ: ಕೇಂದ್ರದ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಸಿಪಿಐ(ಎಂ) ಪಕ್ಷದಿಂದ ವಾಲ್ಮೀಕಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಮುಖಂಡ ಕೆ.ಹುಸೇನಪ್ಪ ಮಾತನಾಡಿ, ಕಳೆದ ಹತ್ತು ವರ್ಷದಿಂದಲೂ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯ ಮೋದಿ ಸರ್ಕಾರ ರೈತರು, ಬಡವರು, ಕೂಲಿ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದೆ. ದಿನ ನಿತ್ಯದ ಅಗತ್ಯ ವಸ್ತುಗಳು, ಧವಸ ಧಾನ್ಯಗಳು ಸೇರಿದಂತೆ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಿರುದ್ಯೋಗದ ಪ್ರಮಾಣ ಹೆಚ್ಚಳವಾಗುತ್ತಿದ್ದರೂ ಉದ್ಯೋಗ ಕೊಡುವ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದು ದೂರಿದರು.
ಪ್ರಧಾನಿ ಮೋದಿ ಅವರು ಜನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ. ದೇಶದ ಜನ ಜನರಿಗೆ ಎರಡು ಚುನಾವಣೆಗಳಲ್ಲಿ ನೀಡಿದ ಭರವಸೆಯಂತೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಪ್ರತಿ ವರ್ಷ ಕೋಟಿ ಉದ್ಯೋಗ ನೀಡುವುದು, ಬೆಲೆ ಏರಿಕೆ ತಡೆಗಟ್ಟುವುದು, ಕಪ್ಪುಹಣ ಹೊರ ತೆಗೆದು ಬಡವರ ಖಾತೆಗೆ ತಲಾ ₹ 15 ಲಕ್ಷ ಜಮಾ ಮಾಡುವುದು ಸೇರಿದಂತೆ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ರಸಾಯನಿಕ ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳು, ಜನಸಾಮಾನ್ಯರ ಆರೋಗ್ಯದ ಔಷಧಗಳ ಬೆಲೆಗಳು ಗಗನಕ್ಕೆ ಏರಿವೆ. ಬೆಲೆ ಏರಿಕೆಯ ಹಿಂದೆ ಅಗತ್ಯ ವಸ್ತುಗಳ ಬೆಲೆಗಳ ಮೇಲಿನ ನಿಯಂತ್ರಣ ವಾಪಸು ಪಡೆದಿರುವುದು, ಸಹಾಯಧನ ಕಡಿತ ಮಾಡಿರುವುದು, ಮುಕ್ತ ವ್ಯಾಪಾರಕ್ಕೆ ದೇಶವನ್ನು ತೆರೆದಿರುವುದು ಕಾರಣ ಎಂದು ಆರೋಪಿಸಿದರು.
ಖಾಸಗೀಕರಣ ನಿಲ್ಲಿಸಬೇಕು. ಉದ್ಯೋಗ ಖಾತ್ರಿ ಕೆಲಸವನ್ನು ತಲಾ 200 ದಿನಗಳಿಗೆ ಮತ್ತು ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ವಿಸ್ತಾರ ಮಾಡಬೇಕೆಂದು ಅಗ್ರಹಿಸಿದರು.
ಬಸವರಾಜ ಮರಕುಂಬಿ, ಮಲ್ಲಪ್ಪ ಮ್ಯಾಗಡೆ, ಶಿವಕುಮಾರ ಈಚನಾಳ, ಪರಶುರಾಮ, ನಬಿಸಾಬ, ಅಲ್ಲಾಸಾಬ್, ದುರ್ಗಪ್ಪ, ನಿಂಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.