ಕೊಪ್ಪಳ: ‘ಹಲವು ವರ್ಷಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ’ ಎಂದು ಸಂಸದ ಸಂಗಣ್ಣ ಕರಡಿ ಅಭಿಪ್ರಾಯಪಟ್ಟರು.
ಶ್ರೀರಾಮಜನ್ಮಭೂಮಿ ತೀರ್ಥ ಟ್ರಸ್ಟ್ ವತಿಯಿಂದ ನಗರದ ಶ್ರೀರಾಘವೇಂದ್ರ ಮಠದಲ್ಲಿ ನಡೆದ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
‘ತಾವು ಮತ ನೀಡಿ ದೇಶದ ಪ್ರಧಾನಿಯನ್ನಾಗಿ ಮಾಡಿದ ನರೇಂದ್ರ ಮೋದಿಯವರು ನಿಮ್ಮ ಶ್ರಮಕ್ಕೆ ಮಂದಿರ ಫಲವನ್ನಾಗಿ ನೀಡಿದ್ದಾರೆ’ ಎಂದರು.
ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ,‘ಮಂದಿರ ಸುಮಾರು ವರ್ಷಗಳ ಕನಸಾಗಿತ್ತು. ಈಗ ಅದು ನನಸಾಗುತ್ತಿದೆ. ಎಲ್ಲರೂ ತನು–ಮನದಿಂದ ಸಹಾಯ ಮಾಡಿ’ ಎಂದರು. ಮಂದಿರಕ್ಕೆ ಒಂದು ಲಕ್ಷ ನಿಧಿ ನೀಡಿದರು.
ಮುಖ್ಯ ವಕ್ತಾರ ವಸಂತ ಪೂಜಾರ ಮಾತನಾಡಿ,‘ದೇಶದಲ್ಲಿ ಇಷ್ಟು ವರ್ಷ ಅನೇಕರು ರಾಮನ ಹೆಸರಿಟ್ಟುಕೊಂಡು ಆಡಳಿತ ಮಾಡಿದರೇ ಹೊರತು ರಾಮನ ಕೆಲಸಗಳನ್ನು ಮಾಡಲಿಲ್ಲ. ಮಂದಿರದ ನಿರ್ಮಾಣಕ್ಕಾಗಿ ಅನೇಕ ಹೋರಾಟಗಳು ನಡೆದವು. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಅದಕ್ಕಾಗಿಯೇ ಸಾರ್ವಜನಿಕರು ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು’ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಬಸವರಾಜ ಡಂಬಳ, ರಾಘವೇಂದ್ರ ಮಠದ ಪ್ರಧಾನ ಅರ್ಚಕ ಪ್ರೇಮಾಚಾರ ಮುಳಗುಂದ ಹಾಗೂ ಸುನೀಲ್ ಹೆಸರೂರು ಇದ್ದರು.
ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಸಂಚಾಲಕ ಪ್ರಾಣೇಶ ಜೋಶಿ ನಿರೂಪಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಹಕ್ಕಾಪಕ್ಕಿ ವಂದಿಸಿದರು.
ಅಭಿಯಾನಕ್ಕೆ ಶಾಸಕರಿಂದ ಚಾಲನೆ
ಗಂಗಾವತಿ: ತಾಲ್ಲೂಕಿನ ರಾಂಪುರ ಗ್ರಾಮದ ರಾಮಮಂದಿರದಲ್ಲಿ ಶನಿವಾರ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು,‘ರಾಮಮಂದಿರ ನಿರ್ಮಾಣದಂತ ಪವಿತ್ರ ಕೆಲಸದಲ್ಲಿ ಪ್ರತಿಯೊಬ್ಬರೂ ತೊಡಗಿಕೊಳ್ಳಬೇಕು’ ಎಂದರು.
ಆನೆಗೊಂದಿಯ ದುರ್ಗಾದೇವಿ ದೇಗುಲದ ಬ್ರಹ್ಮಾನಂದ ಸ್ವಾಮೀಜಿ, ರಾಜವಂಶಸ್ಥ ಶ್ರೀಕೃಷ್ಣ ದೇವರಾಯ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಪ್ರಮುಖರಾದ ವಿನಯ ಪಾಟೀಲ, ಎಚ್.ಸಿ.ಯಾದವ್, ಪಿ.ಲಕ್ಷ್ಮಣ ನಾಯಕ, ಗೌರೀಶ ಬಾಗೋಡಿ, ಗಿರಿರಾಜ ಹಾಗೂ ಹೊನ್ನಪ್ಪ ಇದ್ದರು.
‘ರಾಮರಾಜ್ಯವಾಗಲಿ’
ತಾವರಗೇರಾ: ‘ರಾಮ ರಾಜ್ಯದಲ್ಲಿ ಪ್ರಜೆಗಳು ಪರಸ್ಪರ ಸ್ನೇಹ, ಪ್ರೀತಿ ಹಾಗೂ ಬಂಧುತ್ವದಿಂದ ಸಂತೃಪ್ತ ಜೀವನ ನಡೆಸುತ್ತಿದ್ದರು. ಎಲ್ಲಡೆ ಸುಖ, ಸಮೃದ್ಧಿ ನೆಲೆಸಿತ್ತು’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೀರಭದ್ರಪ್ಪ ನಾಲತವಾಡ ಅಭಿಪ್ರಾಯಪಟ್ಟರು.
ಪಟ್ಟಣದ ರಾಮ ಮಂದಿರದಲ್ಲಿ ಭಾನುವಾರ ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ದೃಢ ಸಂಕಲ್ಪದಿಂದ ಭಾರತವನ್ನು ಮತ್ತೆ ರಾಮ ರಾಜ್ಯವನ್ನಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕಾದ ಅಗತ್ಯವಿದೆ’ ಎಂದುಹೇಳಿದರು.
‘ಎಲ್ಲರೂ ತಮ್ಮ ಕೈಲಾದಷ್ಟು ನಿಧಿ ನೀಡಬೇಕು’ ಎಂದರು.
ಯುವ ಮುಖಂಡ ಶಂಭನಗೌಡ ಪೊಲೀಸ್ ಪಾಟೀಲ, ಶ್ರೀಕಾಂತ ಹೊಸಕೇರಾ, ಪ.ಪಂ. ಅಧ್ಯಕ್ಷ ವಿಕ್ರಮ್ ರಾಯ್ಕರ್, ಪ.ಪಂ. ಸದಸ್ಯ ಚಂದ್ರಶೇಖರ ನಾಲತವಾಡ ಮಾತನಾಡಿದರು.
ಪ.ಪಂ. ಸದಸ್ಯರಾದ ಚನ್ನಪ್ಪ ಸಜ್ಜನ್, ವಿರೇಶ ಭೋವಿ, ಲಕ್ಷ್ಮಣ ಮುಖಿಯಾಜಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೂಲಕುಂಟಿ, ಶ್ಯಾಮೂರ್ತಿ ಅಂಚಿ, ನಾರಾಯಣಸಿಂಗ್ ಬಳ್ಳಾರಿ, ಮಂಜುನಾಥ ದೇಸಾಯಿ ಹಾಗೂ ಮಂಜುನಾಥ ದರೋಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.