ಕೊಪ್ಪಳ: ಬಳ್ಳಾರಿಯ ಎಎಸ್ಎಂ ಕಾಲೇಜಿನ ಕಾವ್ಯ ಎನ್. ನಗರದಲ್ಲಿ ಶನಿವಾರ ಬೆಳಗ್ಗೆ ನಡೆದ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ನಡುವಿನ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.
ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆರಂಭವಾದ ಸ್ಪರ್ಧೆಗೆ ಒಟ್ಟು ಹತ್ತು ಕಿ.ಮೀ. ಗುರಿ ನಿಗದಿ ಮಾಡಲಾಗಿತ್ತು. ಕಾವ್ಯಾ 46 ನಿಮಿಷದಲ್ಲಿ ಗುರಿ ತಲುಪಿ ಮೊದಲಿಗರಾದರು.
ಹುಬ್ಬಳ್ಳಿಯ ಎಸ್ಜೆಎಂವಿಎಸ್ ಕಾಲೇಜಿಯ ತನಿಷಾ ಇಂದರಗಿ (49 ನಿಮಿಷ), ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೂಮಿಕಾ (53ನಿ.18ಸೆ.), ಧಾರವಾಡದ ಕೆ.ಎಸ್. ಜಗಳೂರು ಕಾಲೇಜಿನ ಅನುಪ್ರಭಾ (53ನಿ. 36ಸೆ.), ಬೀದರ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಲ್ಪಾ (55ನಿ, 50ಸೆ.) ಮತ್ತು ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಗೀತಾ (56ನಿ.30ಸೆ.) ಕ್ರಮವಾಗಿ ನಂತರದ ಐದು ಸ್ಥಾನಗಳನ್ನು ಪಡೆದುಕೊಂಡರು.
ರಾಜ್ಯದ ವಿವಿಧೆಡೆಯಿಂದ ಎಂಟು ಕಾಲೇಜುಗಳಿಂದ 36 ಜನ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇದರಲ್ಲಿ ಮೊದಲ ಆರು ಸ್ಥಾನಗಳನ್ನು ಪಡೆದ ಕ್ರೀಡಾಪಟುಗಳು ಮುಂಬರುವ ಅಂತರ ವಾರ್ಸಿಟಿ ಕ್ರೀಡಾಕೂಟಕ್ಕೆ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿದರು.