ಗಂಗಾವತಿ: ತಾಲ್ಲೂಕು ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರು ಹಾಗೂ ವಕೀಲರ ಮನವೊಲಿಕೆ ಪ್ರಯತ್ನ ಯಶಸ್ವಿಯಾಗಿ, ವಿಚ್ಛೇದನಕ್ಕೆ ಅರ್ಜಿ ಅಲ್ಲಿಸಿದ್ದ ಆರು ಜೋಡಿಗಳು ಒಂದಾದವು.
ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಜಗಳ, ವಿವಾದ, ಮನೆ ಸಮಸ್ಯೆಗಳಿಗೆ ಬೇಸತ್ತು 6 ಜೋಡಿಗಳು ವಿಚ್ಛೇದನ ಕೋರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದವು.
ನ್ಯಾಯಾಧೀಶರು ಮತ್ತು ವಕೀಲರು, 6 ಜೋಡಿಗಳಿಗೆ ಬುದ್ಧಿಮಾತು ಹೇಳಿ, ವಿಚ್ಛೇದನ ಸಮಯವನ್ನು ಮುಂದಕ್ಕೆ ಹಾಕುತ್ತ ಮನವೋಲಿಸಿ ದಂಪತಿಯನ್ನು ಒಂದು ಮಾಡಲಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹುಲಿಹೈದರ್ ಗ್ರಾಮದ ಭರಮಣ್ಣ, ಅಂಬಮ್ಮ, ಜಂಗಮರ ಕಲ್ಗುಡಿ ಗ್ರಾಮದ ಶಿವಮ್ಮ, ಗುಲಪ್ಪ(2 ವರ್ಷ), ಸಿದ್ದಾಪುರ ಗ್ರಾಮದ ರಾಘವೇಂದ್ರ, ಎಂ. ತ್ರಿವೇಣಿ, ಬಾಗಲಕೋಟೆ ರಾಜೇಶ, ಜ್ಯೋತಿ, ಚಿಕ್ಕಡಂಕನಕಲ್ ಗ್ರಾಮದ ಬಸವರಾಜ, ಲಕ್ಷ್ಮಿ, ಗೋಡಿನಾಳದ ಶಿವಲಿಂಗಮ್ಮ, ಮುತ್ತಣ್ಣ ಎಂಬ ದಂಪತಿಗಳು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಗಂಗಾವತಿ ತಾಲ್ಲೂಕು ನ್ಯಾಯಾಲಯದಲ್ಲಿ ಒಟ್ಟು 9,493 ಬಾಕಿ ಪ್ರಕರಣಗಳಿದ್ದು, ರಾಷ್ಟ್ರೀಯ ಲೋಕ ಆದಾಲತ್ನಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಮನೆ ಕರ, ಕೌಟುಂಬಿಕ ದೌರ್ಜನ್ಯ, ಜೀವ ನಾಂಶ, ಚೆಕ್ ಬೌನ್ಸ್, ಜನನ ಪ್ರಕರಣ, ಕ್ರಿಮಿನಲ್ ಕೇಸ್ ಸೇರಿ ಒಟ್ಟು 1,796 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.
ಆದರೆ 4 ನ್ಯಾಯಾಲಯಗಳಲ್ಲಿ ಸೇರಿ ಮೋಟಾರು ವಾಹನ, ಬ್ಯಾಂಕ್, ಜನನ-ಮರಣ, ಚೆಕ್ ಬೌನ್ಸ್, ಕ್ರಿಮಿನಲ್, ವೈವಾಹಿಕ 1160 ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ. 4 ನ್ಯಾಯಾಲಯಗಳಲ್ಲಿ ಸೇರಿ ಒಟ್ಟು ₹7,45,91,771 ಹಣವನ್ನು ಸರ್ಕಾರಕ್ಕೆ ಜಮಾ ಮಾಡಲಾಗಿದೆ.
ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಸದಾನಂದ ನಾಗಪ್ಪ ನಾಯ್ಕ, ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶ ರಮೇಶ ಎಸ್.ಗಾಣಿಗೇರಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರ್ಬಾರೇ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಪಾಟೀಲ ಸೇರಿದಂತೆ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಸೇರಿ ವಕೀಲರು, ಅರ್ಜಿದಾರರು, ಎಸ್ಬಿಐ ಬ್ಯಾಂಕ್, ಕೆನರಾ ಬ್ಯಾಂಕ್, ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.