ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುವೆ ನೀರು ದುರ್ಬಳಕೆ ತಡೆಗೆ ಕ್ರಮ ಕೈಗೊಳ್ಳಿ: ಸಚಿವ ಆನಂದ್ ಸಿಂಗ್

Last Updated 13 ಜುಲೈ 2021, 4:42 IST
ಅಕ್ಷರ ಗಾತ್ರ

ಕೊಪ್ಪಳ: ಜು.18ರಿಂದ ತುಂಗಭದ್ರಾ ಕಾಲುವೆಗೆ ನೀರು ಬಿಡಲು ತೀರ್ಮಾನಿಸಿದ್ದು, ಎಡ ಮತ್ತು ಬಲದಂಡೆ ಕಾಲುವೆಗಳಲ್ಲಿ ಅಕ್ರಮ ಪಂಪ್‌ಸೆಟ್‌ಗಳ ಮೂಲಕ ನೀರು ಪಡೆಯುವವರ ವಿರುದ್ಧ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಜ್ ಮತ್ತು ವಕ್ಫ್ ಇಲಾಖೆ ಸಚಿವ ಆನಂದ್ ಸಿಂಗ್ಸೂಚನೆ ನೀಡಿದರು.

ಮುನಿರಾಬಾದ್‌ನ ತುಂಗಭದ್ರಾ ಕಾಡಾಕಚೇರಿಯಲ್ಲಿ ಸೋಮವಾರ ನಡೆದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ 115ನೇ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತುಂಗಭದ್ರಾ ಎಡದಂಡೆಯ ಮೇಲೆ ಅಕ್ರಮ ಪಂಪ್‌ಸೆಟ್‌ಗಳ ಮೂಲಕ ನೀರು ಹೊಲಗಳಿಗೆ ಬಿಡುತ್ತಿರುವುದರಿಂದ ಎಡದಂಡೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಹಾಗಾಗಿ ರಾಯಚೂರು, ಕೊಪ್ಪಳ, ಹೊಸಪೇಟೆ ಮತ್ತು ಬಳ್ಳಾರಿ ಜಿಲ್ಲೆಯಜಿಲ್ಲಾಡಳಿತದ ಸಹಯೋಗದಲ್ಲಿ ತಂಡ ರಚಿಸಿಕೊಂಡು, ಅಕ್ರಮ ಪಂಪ್‌ಸೆಟ್‌ ಜಪ್ತಿ ಮಾಡಿ,ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಂತವರನ್ನು ಅಮಾನತ್ತು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌,ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳಿದ್ದು, ಅವುಗಳನ್ನು ತಡೆಗಟ್ಟಿದಾಗ ಮಾತ್ರ ಕೆಳಭಾಗದ ರೈತರಿಗೆ ನೀರು ಬರುತ್ತವೆ. ಇಲ್ಲವಾದರೆ ರೈತರಿಗೆ ತಮ್ಮ ಬೆಳೆಗಳಿಗೆ ನೀರು ಉಣಿಸಲು ಕಷ್ಟವಾಗುತ್ತಿದ್ದು, ಅವರು ಮಳೆ ಬಂದಾಗಲೇ ಬೆಳೆ ಬೆಳೆಯಬೇಕಾದ ಪರಿಸ್ಥಿತಿ ಇದೆ ಎಂದರು.

ಸಂಸದರಾದ ಸಂಗಣ್ಣ ಕರಡಿ, ವೈ.ದೇವೇಂದ್ರಪ್ಪ, ರಾಜಾ ಅಮರೇಶ್ವರ ನಾಯಕ್, ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡಯ್ಯ, ಶಾಸಕರಾದ ಸೋಮಶೇಖರ ರೆಡ್ಡಿ, ರಾಜಾ ವೆಂಕಟಪ್ಪ ನಾಯಕ್, ಬಸವರಾಜ ದಡೇಸೂಗೂರು, ಕೆ.ರಾಘವೇಂದ್ರ ಹಿಟ್ನಾಳ, ಬಸನಗೌಡ ತುರ್ವಿಹಾಳ, ಬಿ.ನಾಗೇಂದ್ರ, ಜೆ.ಎನ್ ಗಣೇಶ್, ಡಾ.ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿಗಳಾದ ವಿಕಾಸ್ ಕಿಶೋರ್ ಸುರಳ್ಕರ್, ಪವನಕುಮಾರ ಮಾಲಪಾಟಿ, ರಾಯಚೂರುಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಮುನಿರಾಬಾದ್ ಕಾಡಾ ಕಚೇರಿಯ ಮುಖ್ಯ ಇಂಜಿನಿಯರ್ ಬಿ.ಆರ್. ರಾಠೋಡ್,ಎಂಜಿನಿಯರ್ ಪ್ರಕಾಶ ಸೇರಿದಂತೆ ವಿವಿಧ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಅಗತ್ಯ ಸಿಬ್ಬಂದಿ ನೇಮಕಕ್ಕೆ ಮನವಿ

ತುಂಗಭದ್ರಾ ಬಲದಂಡೆ ಕಾಲುವೆಗೆ 12 ತಿಂಗಳು ನೀರು ಹರಿಯುತ್ತದೆ. ಎಡದಂಡೆಗೆ ಹಲವಾರು ಅಕ್ರಮ ಪಂಪ್‌ಸೆಟ್‌ಗಳು ಇರುವುದರಿಂದ ಇಲ್ಲಿ ನೀರಿನ ಸಮಸ್ಯೆ ಇದೆ. ಕಾಲುವೆಗಳ ನಿರ್ವಹಣೆಗಾಗಿ ಗ್ಯಾಂಗ್‌ಮೆನ್ ಮತ್ತು ಇಂಜಿನಿಯರ್‌ಗಳ ಕೊರತೆ ಇದೆ. ಹಾಗಾಗಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ತುಂಗಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸಿ ಅಧಿಕೃತ ಅಚ್ಚುಕಟ್ಟು ಪ್ರದೇಶದಲ್ಲಿ ನಿಗದಿತಬೆಳೆ ಮಾತ್ರ ಬೆಳೆಯಲು ಹಾಗೂ ಸಮರ್ಪಕ ನೀರು ನಿರ್ವಹಣೆಗೆ ಇಲಾಖೆಯೊಡನೆ ಸಹಕರಿಸಲು ರೈತರಿಗೆ ಮನವಿ ಮಾಡಲಾಯಿತು.

ಪ್ರಸಕ್ತ ಅಂದಾಜಿಸಿದ ನೀರಿನ ಪ್ರಮಾಣವು ತಾತ್ಕಾಲಿಕವಾಗಿದ್ದು, ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣದ ಮೇಲೆ ಆವಲಂಭಿತವಾಗಿದ್ದು, ಮುಂದೆ ಒಳ ಹರಿವಿನ ಪ್ರಮಾಣದಲ್ಲಿ ಕೊರತೆ ಉಂಟಾದಲ್ಲಿ ಪರಿಷ್ಕೃತ ಪ್ರಕಟಣೆಯನ್ನು ಪ್ರಕಟಿಸಲಾಗುವುದು ಎಂದು ಅಧೀಕ್ಷಕಎಂಜಿನಿಯರ್ ಎಲ್ ಬಸವರಾಜ್ ತಿಳಿಸಿದರು.

***

ಸಿಂಧನೂರು, ಮಾನ್ವಿ, ರಾಯಚೂರು ಭಾಗಕ್ಕೆ ನೀರು ಒದಗಿಸುವ ಕುರಿತು ಈ ಹಿಂದೆ ಮುಖ್ಯಮಂತ್ರಿಗಳ ಗಮನಕ್ಕೂ ತಂದು, ಶಿರವಾರದವರೆಗೂ ನೀರು ಹರಿಸಲಾಗಿತ್ತು. ನಾವು ಈ ಕುರಿತು ಗಮನ ಹರಿಸುತ್ತಿದ್ದೇವೆ

- ಎಚ್‌.ಎಂ.ತಿಪ್ಪೇರುದ್ರಸ್ವಾಮಿ, ಅಧ್ಯಕ್ಷ, ತುಂಗಭದ್ರಾ ಕಾಡಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT