ಗಂಗಾವತಿ: ತಾಲ್ಲೂಕಿನ ರಾಂಪೂರ ಸಮೀಪ ನಡೆಯುತ್ತಿರುವ ವಿಜಯನಗರ ಕಾಲುವೆ ಕಾಮಗಾರಿಯನ್ನು ಶಾಸಕ ಪರಣ್ಣ ಮುನವಳ್ಳಿ ಶುಕ್ರವಾರ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಅವರು,‘ಸುಮಾರು ವರ್ಷಗಳ ಇತಿಹಾಸ ಇರುವ ವಿಜಯನಗರ ಕಾಲುವೆ ಸಾಕಷ್ಟು ಹಾಳಾಗಿ ಹೋಗಿತ್ತು. ಕೊನೆ ಭಾಗದ ರೈತರಿಗೆ ನೀರು ದೊರೆಯದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿಯೇ ಸದ್ಯ ಕಾಲುವೆ ನವೀಕರಣ ಮಾಡಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದೆ. ಆದಷ್ಟು ಬೇಗ ಮುಗಿಸಲು ಸೂಚನೆ ನೀಡಲಾಗಿದೆ. ಕೋವಿಡ್ ಕಾರಣ ಕೆಲ ತಿಂಗಳಿಂದ ಹೇಳಿಕೊಳ್ಳುವ ಮಟ್ಟದಲ್ಲಿ ಕಾಮಗಾರಿ ನಡೆದಿಲ್ಲ’ ಎಂದು ಹೇಳಿದರು.
ಗುಣಮಟ್ಟದಿಂದ ಕಾಲುವೆ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಹೇಳಲಾಗಿದೆ. ಒಂದು ವೇಳೆ ಕಾಮಗಾರಿ ಕಳಪೆ ಎಂದು ಕಂಡು ಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಕ್ರಮಕ್ಕೆ ಮುಂದಾಗಲಾಗುವುದು ಎಂದು ಹೇಳಿದರು.
ತುಂಗಭದ್ರಾ ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಪ್ರಮುಖರಾದ ಸಿದ್ಧರಾಮಯ್ಯಸ್ವಾಮಿ, ಸುದರ್ಶನ ವರ್ಮಾ, ಚಂದ್ರು ಚಾಪುಡಿ, ಮಲ್ಲಿಕಾರ್ಜುನ, ಅಮರೇಶ್, ಗೌರೀಶ್ ಬಾಗೋಡಿ, ನೀಲಪ್ಪ, ವಿರುಪಾಕ್ಷಸ್ವಾಮಿ ಹಾಗೂ ಇತರರು ಇದ್ದರು.