ಕೊಪ್ಪಳ:ಇಳಿ ವಯಸ್ಸಿನಲ್ಲಿ ಆಸರೆಯಾಗಬೇಕಿದ್ದ ಮಗ ದೂರಾದಾಗ, ಅಸಹಾಯಕ ಸ್ಥಿತಿಯಲ್ಲಿದ್ದ ತಾಯಿಗೆ ಮಗಳು ನೆರಳು ನೀಡಿದರೆ, ಹಸಿದ ಹೊಟ್ಟೆಗೆ ಅನ್ನ ನೀಡಿದ್ದು, ನರೇಗಾ ಯೋಜನೆ.
ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ನಿವಾಸಿಯಾಗಿರುವ 75 ವರ್ಷದ ವೃದ್ಧೆ ಲಕ್ಷ್ಮವ್ವ ಕಳೆದ ಎರಡು ವರ್ಷಗಳಿಂದ ನರೇಗಾದಡಿ ಕೆಲಸ ಮಾಡುವ ಮೂಲಕ ಗ್ರಾಮದಲ್ಲಿ ಮಗಳ ಆಶ್ರಯದಲ್ಲಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ.
ಸುಮಾರು ವರ್ಷಗಳಿಂದ ಮಗಳ ಆಶ್ರಯದಲ್ಲಿಯೇ ಇರುವ ಲಕ್ಷ್ಮವ್ವನಿಗೆ ಸರ್ಕಾರದಿಂದ ಸಿಗುವ ವೃದ್ಯಾಪ್ಯ ವೇತನವೇ ಆಸರೆಯಾಗಿತ್ತು. ಇದೀಗ ಕಳೆದೆರೆಡು ವರ್ಷಗಳಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಮೂಲಕ ಬದುಕನ್ನು ಮತ್ತಷ್ಟು ಸುಂದರವಾಗಿಸಿಕೊಂಡಿದ್ದಾರೆ.
ಮಗಳು ಕೂಡ ಯೋಜನೆಯಡಿ ಕೆಲಸ ಮಾಡುತ್ತಿದ್ದು, ಮಗಳ ಪತಿಯು ನಿಧನ ಹೊಂದಿರುವುದರಿಂದ ತಾಯಿ-ಮಗಳಿಗೆ ನರೇಗಾ ಆಸರೆಯಾಗಿದೆ.
ಹಿರಿಯರಿಗೆ ಕೆಲಸದಲ್ಲಿ ಶೇ 50 ರಷ್ಟು ರಿಯಾಯಿತಿ ಇರುವುದರಿಂದ ಲಕ್ಷ್ಮವ್ವನಿಗೆ ಅನುಕೂಲವಾಗಿದೆ. ಕೆಲಸದ ಸ್ಥಳದಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ಕೆಲಸ ಮಾಡುವವರಿಗೆ ಕುಡಿಯುವ ನೀರನ್ನು ಒದಗಿಸುವ ಕೆಲಸವನ್ನು ಲಕ್ಷ್ಮವ್ವ ಮಾಡುತ್ತಾರೆ. ಇದರಿಂದ ವಯಸ್ಕರಷ್ಟೇ ಸಮಾನ ವೇತನ ನರೇಗಾದಡಿ ಸಿಗುತ್ತಿರುವುದರಿಂದ ನಮ್ಮಂತ ವೃದ್ಧರಿಗೆ ಬಹಳ ಅನುಕೂಲವಾಗಿದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
'ನರೇಗಾ ಯೋಜನೆ ಅನೇಕ ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗುತ್ತಿದ್ದು, ಕೂಲಿ ದಿನಗಳನ್ನು ಕೂಡಾ ಹೆಚ್ಚಿಸಲಾಗಿದೆ. ಯಾರೇ ಬಂದರೂ ಅವರ ಸಾಮರ್ಥ್ಯದ ಅನುಸಾರ ಕೆಲಸ ನೀಡುವ ಮೂಲಕ ಜನರಿಗೆ ಉದ್ಯೋಗ ನೀಡಲಾಗುತ್ತದೆ' ಎಂದು ಟಿಐಇಸಿ ಸಂಯೋಜಕ ಕೆ.ಶಿವಕುಮಾರ್ಹೇಳುತ್ತಾರೆ.