ಅಳವಂಡಿ : ಸಮೀಪದ ಮೋರನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಸ್ವಚ್ಚತೆಯು ಸಂಪೂರ್ಣ ಮಾಯ ವಾಗಿದ್ದು, ಇದರಿಂದ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ.
ಮೋರನಹಳ್ಳಿ ಗ್ರಾಮವು ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಸುಮಾರು 1,800 ಜನಸಂಖ್ಯೆ ಹೊಂದಿದ್ದು, ನಾಲ್ಕು ಜನ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಸರ್ಕಾರ ಸ್ವಚ್ಚ ಭಾರತ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಸ್ವಚ್ಛತೆ ಮಾತ್ರ ಈ ಗ್ರಾಮದಲ್ಲಿ ಮರೀಚಿಕೆಯಾಗಿ ಉಳಿದಿದೆ.
ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಚತಾ ಅಭಿಯಾನದ ಮೂಲಕ ಅನೇಕ ಜಾಗೃತಿ ಜಾಥಾ ಕೈಗೊಳ್ಳಲಾಗುತ್ತದೆ. ಅದರ ಜೊತೆಗೆ ಸ್ವಚ್ಚತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಆದರೆ ಈ ಗ್ರಾಮದಲ್ಲಿ ಅನೇಕ ಬೀದಿಗಳಲ್ಲಿ ಸ್ವಚ್ಛತೆಯು ಇಲ್ಲದಂತಾಗಿದೆ. ಹೂಳು ತುಂಬಿರುವ ಅನೇಕ ಚರಂಡಿಗಳು ಎಲ್ಲೆಡೆ ದುರ್ವಾಸನೆ ಬೀರುತ್ತಿದೆ.
ಗ್ರಾಮದಲ್ಲಿ ಚರಂಡಿ ಸಮಸ್ಯೆಯ ನಿತ್ಯ ಕಾಣುತ್ತಿದೆ. ಗ್ರಾಮದಲ್ಲಿ ಸರಿಯಾದ ರೀತಿ ಚರಂಡಿ ವ್ಯವಸ್ಥೆ ಇಲ್ಲದೇ, ಕೊಳಚೆ ನೀರು ರಸ್ತೆಗೆ ಹರಿಯುತ್ತಿದೆ. ನಿತ್ಯ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಉಂಟಾಗಿದೆ. ಇದರಿಂದ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಇಲ್ಲಿನ ಗ್ರಾಮಸ್ಥರು ಕಾಲ ಕಳೆಯುತ್ತಿದ್ದಾರೆ.
ಪಂಚಾಯಿತಿಯವರಿಗೆ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾ.ಪಂ ಪಿಡಿಒ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ಗ್ರಾಮ ಪಂಚಾಯಿತಿಯು ಗ್ರಾಮದ ಬೀದಿಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಚರಂಡಿಗಳು ಸಂಪೂರ್ಣ ತುಂಬಿದ್ದು, ಹೂಳು ತೆಗೆದು ಸ್ವಚ್ಛಗೊಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಸ್ವಚ್ಚತೆಯ ಬಗ್ಗೆ ಬೆಟಗೇರಿ ಗ್ರಾ.ಪಂ ಪಿಡಿಒ ಅವರ ಜೊತೆ ಮಾತನಾಡಲು ‘ಪ್ರಜಾವಾಣಿ’ ಪ್ರತಿನಿಧಿ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ.
ಗ್ರಾಮದಲ್ಲಿ ಅಸ್ವಚ್ಚತೆಯ ವಾತಾವರಣ ನಿರ್ಮಾಣವಾಗಿದ್ದು ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.ನಾಗರಾಜ್ ಮೋರನಹಳ್ಳಿ ಗ್ರಾಮಸ್ಥ
ಸ್ವಚ್ಚತೆಗೆ ಗ್ರಾ.ಪಂ ನಿರ್ಲಕ್ಷ್ಯ ವಹಿಸುತ್ತಿದ್ದು ಇದರಿಂದ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಕೂಡಲೇ ಗ್ರಾ.ಪಂನವರು ಸ್ವಚ್ಚತೆಗೆ ಮುಂದಾಗಬೇಕು.ಫಕೀರೇಶ ಹಮ್ಮಿಗಿ ಮೋರನಹಳ್ಳಿ ಗ್ರಾಮಸ್ಥ
ಮೋರನಹಳ್ಳಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ಸ್ವಚ್ಛತೆ ಕಾಪಾಡುವಂತೆ ಪಿಡಿಒ ಅವರಿಗೆ ತಿಳಿಸಲಾಗುವುದುದುಂಡಪ್ಪ ತುರಾದಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.