ಕಾರಟಗಿ: ಬಿಸಿಯೂಟ ಸಿಬ್ಬಂದಿಯನ್ನು ಕಾಯಂ ಗೊಳಿಸಬೇಕು. ಕನಿಷ್ಠ ₹21 ಸಾವಿರ ಮಾಸಿಕ ವೇತನ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ನ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಬಿಸಿ ಯೂಟದ ಸಿಬ್ಬಂದಿಯನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೊಳಪಡಿಸಬೇಕು. ಅಡುಗೆ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ನಿರ್ಧಾರ ಕೈಬಿಡಬೇಕು. ನಿವೃತ್ತಿಯ ಬಳಿಕ ₹2 ಲಕ್ಷ ಇಡಗಂಟು ಮತ್ತು ಮಾಸಿಕ ₹3 ಸಾವಿರ ಪಿಂಚಣಿ ನೀಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
19 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಯೋಜನೆಯಡಿ ರಾಜ್ಯದಾದ್ಯಂತ 1.28 ಲಕ್ಷ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಖ್ಯ ಅಡುಗೆದಾರರಿಗೆ ಮಾಸಿಕ ₹2,700, ಸಹಾಯಕ ಅಡುಗೆದಾರರಿಗೆ ₹2,600 ಗೌರವಧನ ನೀಡುತ್ತಿವೆ. ಇದರಲ್ಲಿ ಜೀವನ ನಿರ್ವಹಣೆಗೆ ಕಷ್ಟಕರವಾಗಿದೆ. ಶೀಘ್ರವೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇಡಿಕೆ ಈಡೇರಿಸಬೇಕು ಎಂದು ಗ್ರೇಡ್- 2 ತಹಶೀಲ್ದಾರ್ ವಿಶ್ವನಾಥ ಮುರಡಿ ಅವರಿಗೆ ಸಲ್ಲಿಸಿದರು.
ಎಐಟಿಯುಸಿ ತಾಲ್ಲೂಕು ಘಟಕದ ಅಧ್ಯಕ್ಷೆ ನೀಲಮ್ಮ, ಪದಾಧಿಕಾರಿಗಳಾದ ಗೌರಮ್ಮ, ಸುನಿತಾ, ರೇಣುಕಾ, ಪ್ರೇಮಾ, ಶೋಭಾ, ಗೀತಾ ಹಾಗೂ ಮಹಾದೇವಿ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.