ಗಂಗಾವತಿ: ಇಲ್ಲಿನ ಹಿರೇಜಂತಕಲ್ಲಿನ 28ನೇ (32) ವಾರ್ಡ್ನಲ್ಲಿರವ ಡಾ.ಬಿ.ಆರ್ ಅಂಬೇಡ್ಕರ್ ಗ್ರಂಥಾಲಯಕ್ಕೆ ಗ್ರಂಥಪಾಲಕರನ್ನು ನಿಯೋಜಿಸುವಂತೆ ಆಗ್ರಹಿಸಿ ಮುಖಂಡ ಹುಸೇನಪ್ಪ ಹಂಚಿನಾಳ ನೇತೃತ್ವದಲ್ಲಿ ನಿವಾಸಿಗಳು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಂತರ ಮಾತನಾಡಿ, ಗ್ರಂಥಾಲಯ ನಿರ್ಮಾಣವಾಗಿ ಹಲವು ವರ್ಷಗಳು ಕಳೆದಿವೆ. ಈವರೆಗೆ ಇದರ ನಿರ್ವಹಣೆಗೆ ಸೂಕ್ತ ಗ್ರಂಥಪಾಲಕರಿಲ್ಲ. ಕಳೆದ 8-9 ವರ್ಷಗಳಿಂದ ಪುಸ್ತಕಗಳ ಪೂರೈಕೆ ಇಲ್ಲ. ಗ್ರಂಥಾಲಯಕ್ಕೆ ಸಿಬ್ಬಂದಿ ಇರದ ಕಾರಣ, ಇಲ್ಲಿ ಯುವಕರು ಇದನ್ನು ದುಶ್ಚಟಗಳ ತಾಣವಾಗಿ ಪರಿವರ್ತಿಸಿಕೊಂಡಿದ್ದಾರೆ. ಇದರಿಂದ ಗ್ರಂಥಾಲಯಕ್ಕೆ ಬರುವ ಕೆಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ತುಂಬಾ ತೊಂದರೆಯಾಗಿದೆ ಎಂದರು.
ಮಂಜುನಾಥ ಆರತಿ ಮಾತನಾಡಿ, ಈ ವಾರ್ಡ್ನಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿದ್ದು, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆಯಾಗಲು, ಈ ಗ್ರಂಥಾಲಯಕ್ಕೆ ಬರುತ್ತಾರೆ. ಆದರೆ ಇದರು ಸದುಪಯೋಗ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಇಲ್ಲಿ ಸುಸಜ್ಜಿತ ಕಟ್ಟಡ ಜೊತೆಗೆ ಪಠ್ಯಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು, ದಿನ,ವಾರ, ಮಾಸಿಕ ಪತ್ರಿಕೆಗಳು ಬೇಕಾಗುತ್ತವೆ ಎಂದರು.
ಪೌರಾಯುಕ್ತರು ಕೂಡಲೆ ಎಚ್ಚೆತ್ತು ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.