ಗಂಗಾವತಿ: ‘ಹಿಂದೂ ಧರ್ಮ ಗ್ರಂಥಗಳಲ್ಲಿ ಲಿಖಿತ ಬರಹಗಳ ಪ್ರಕಾರ, ಆನೆಗೊಂದಿ ಸಮೀಪದ ಕಿಷ್ಕಿಂಧಾ ಪ್ರದೇಶದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ’ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ರೀ ಶ್ರೀ ರವಿಶಂಕರ್ ಗುರೂಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿ ಪರ್ವತಕ್ಕೆ ಶುಕ್ರವಾರ ಭೇಟಿ ನೀಡಿ, ಆಂಜನೇಯ ದೇವರ ದರ್ಶನ ಪಡೆದು ಪವಮಾನ ಹೋಮ ಪೂರೈಸಿ, ನಂತರರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ತಿರುಪತಿ ತಿರುಮಲ ದೇವಾಲಯ ಆಡಳಿತ ಮಂಡಳಿ (ಟಿಟಿಡಿ) ನೀಡಿರುವ ದಾಖಲೆ ಯಾವುದೇ ಕಾರಣಕ್ಕೂ ಸ್ವೀಕಾರಕ್ಕೆ ಅರ್ಹವಲ್ಲ. ಅವರ ದಾಖಲೆಗಳಲ್ಲಿ ಗೊಂದಲವಿದೆ. ಅದಕ್ಕೆ ಮಹತ್ವ ನೀಡಬಾರದು. ಅದು ಸುಳ್ಳು’ ಎಂದರು.
‘ವಾಲ್ಮೀಕಿ ರಾಮಾಯಣ ವರ್ಣಿಸಿದ ಕಿಷ್ಟಿಂಧೆಯ ಎಲ್ಲ ರೂಪಗಳನ್ನು ಅಂಜನಾದ್ರಿ ಪ್ರದೇಶ ಒಳಗೊಂಡಿದೆ. ವಾಲಿಸುಗ್ರೀವರ ನಾಡು, ವಾನರ ವೀರರ ಬೀಡು ಎಂದು ವರ್ಣಿಸಲಾಗಿದೆ. ವಾನರ ವೀರ ಹನುಮಂತ ಇಲ್ಲಿಯವನೇ’ ಎಂದರು.
‘ವಾಲಿ ಕಿಲ್ಲಾ, ಶಬರಿ ಗುಡ್ಡ, ಪಂಪಾ ಸರೋವರ, ಋಷ್ಯಮುಖ ಪರ್ವತ, ಮಾತಂಗ ಪರ್ವತ, ಅಂಜನಾದ್ರಿ ಇಲ್ಲಿವೆ. ಇತಿಹಾಸಕಾರರು ಈ ಸ್ಥಳಗಳ ಮೇಲೆ ಸಂಶೋಧನೆ ನಡೆಸಿ, ಅಂಜನೇಯ ಜನ್ಮಸ್ಥಳವೆಂದು ದೃಢಪಡಿಸಿದ್ದಾರೆ’ ಎಂದರು.
‘ಮುಂಬರುವ ದಿನಗಳಲ್ಲಿ ಕಿಷ್ಕಿಂದಾ, ಅಂಜನಾದ್ರಿ ಸ್ಥಳಗಳು ಪ್ರಸಿದ್ಧಿ ಪಡೆಯಲಿವೆ. ಪ್ರತಿಯೊಬ್ಬ ಭಕ್ತ ಒಮ್ಮೆಯಾದರು ಕಿಷ್ಕಿಂದಾ, ಅಂಜನಾದ್ರಿಗೆ ಭೇಟಿ ನೀಡಬೇಕು. ಇಲ್ಲಿ ಭಕ್ತರಿಗಾಗಿ ಸರ್ಕಾರ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ, ಗಂಗಾವತಿಗೆ ಹೆಚ್ಚಿನ ರೈಲ್ವೆ ಮಾರ್ಗಗಳನ್ನು ಕಲ್ಪಿಸಬೇಕು’ ಎಂದರು.