ಕೊರೊನಾ ಮಹಾಮಾರಿಯಿಂದ ಸಾಯುವುದಕ್ಕಿಂತ ಅಪಾರ ಸಂಖ್ಯೆಯ ಜನ ಆಸ್ಪತ್ರೆಗಳಲ್ಲಿ ಏಕಾಂಗಿಯಾಗಿರುವುದು ಮತ್ತು ಪಿಪಿಇ ಕಿಟ್ ಧರಿಸಿ ಓಡಾಡುವವರನ್ನು ನೋಡಿ ಧೈರ್ಯಗೆಟ್ಟು ಭಯದಿಂದ ಹೃದಯಾಘಾತವಾಗಿ ಸಾಯುತ್ತಿದ್ದಾರೆ. ಅಲ್ಲದೆ ಬೆಡ್, ಆಮ್ಲಜನಕ, ಲಸಿಕೆ ಹಾಗೂ ವೆಂಟಿಲೇಟರ್ ಸಕಾಲಕ್ಕೆ ಸಿಗದೆ ಸಾಯುತ್ತಿದ್ದಾರೆ. ಕೆಲವರನ್ನು ಆಸ್ಪತ್ರೆಗಳಲ್ಲಿ ಸೇರಿಸಿಕೊಳ್ಳದೇ ಸತಾಯಿಸುತ್ತಿರುವುದರಿಂದ ಆಸ್ಪತ್ರೆಗಳ ಮುಂದೆ ಜೀವ ಬಿಡುವಂಥ ಘಟನೆಗಳು ಜರಗುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಕಳೇಬರ ನೀಡಲು ಸತಾಯಿಸುವುದು ಅಮಾನವೀಯ ಎಂದು ಹೇಳಿದ್ದಾರೆ. ಲಾಕ್ಡೌನ್ ಜಾರಿಯಲ್ಲಿರುವುದರಿಂದ ಹೋಂ ಡೆಲಿವರಿ ಎಂದು ಹೇಳುತ್ತಾರೆ. ಆರ್ಥಿಕವಾಗಿ ಮಧ್ಯಮ ವರ್ಗಕ್ಕಿಂತ ಕೆಳಮಟ್ಟದ ಜನರು ₹ 100, ₹ 200 ಗಳ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಅಂಗಡಿಯವರು ವಿಪರೀತ ಬೆಲೆಗೆ ದಿನಸಿ ಮಾರುವುದು ಹಾಗೂ ಹೋಂ ಡೆಲಿವರಿಯ ಸೇವೆಗೆ ಹೆಚ್ಚುವರಿಯಾಗಿ ₹ 40 ವಿಧಿಸುತ್ತಾರೆ. ಈ ಪದ್ಧತಿ ಬಡವರಿಗೆ ಹೊಂದುವುದಿಲ್ಲ ಎಂದಿದ್ದಾರೆ.