ಅಳವಂಡಿ: ತುಂಗಭದ್ರಾ ಜಲಾಶಯದಲ್ಲಿ ನೀರು ಕಡಿಮೆ ಆದಾಗ ಹಿನ್ನೀರು ಪ್ರದೇಶದಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆಯುವುದು ವಾಡಿಕೆ. ಆದ್ದರಿಂದ ತುಂಗಭದ್ರಾ ನದಿ ತಟದಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ತುಂಗಭದ್ರಾ ಜಲಾಶಯದ ನೀರು ನಿಧಾನವಾಗಿ ಖಾಲಿಯಾಗುತ್ತಿದ್ದಂತೆ ಜಲಾಶಯದ ಹಿನ್ನೀರಿನ ಫಲವತ್ತಾದ ಪ್ರದೇಶದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಬಳಿಕ ರೈತರು ಈ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆರಂಭಿಸುತ್ತಾರೆ.
ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಅಣೆಕಟ್ಟು ಸಂಪೂರ್ಣವಾಗಿ ಭರ್ತಿಯಾಗಿದ್ದ ಕಾರಣ ಹಿನ್ನೀರು ಪ್ರದೇಶದ ಜಮೀನುಗಳು ಸಂಪೂರ್ಣವಾಗಿ ಮುಳುಗಡೆಯಾಗಿದ್ದವು. ನಂತರ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸಲಾಯಿತು. ಬಳಿಕ ಜಮೀನುಗಳಲ್ಲಿ ನೀರು ಖಾಲಿಯಾಯಿತು.
ಹಿನ್ನೀರು ಪ್ರದೇಶದ ಸಾವಿರಾರು ಎಕರೆ ಜಮೀನುಗಳಲ್ಲಿ ರೈತರು ಬಿತ್ತನೆ ಕಾರ್ಯ ನಡೆಸಿ ಉತ್ತಮ ಫಸಲು ಪಡೆಯುತ್ತಿದ್ದಾರೆ. ಈ ಜಮೀನು ಫಲವತ್ತತೆಯಿಂದ ಕೂಡಿರುವುದರಿಂದ ರೈತರಿಗೆ ಖರ್ಚು ಕೂಡ ಕಡಿಮೆಯಾಗುತ್ತದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಪಡೆಯುತ್ತಿದ್ದಾರೆ. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ. ಪ್ರಸಕ್ತ ವರ್ಷವೂ ಈ ಭಾಗದ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.