ಬೆಂಗಳೂರು: 'ವಾರ್ಡ್ಗಳ ಸಂಖ್ಯೆ ಹೆಚ್ಚಳ ಹಾಗೂ ವ್ಯಾಪ್ತಿ ವಿಸ್ತರಿಸುವ ನೆಪದಲ್ಲಿ ಪಾಲಿಕೆ ಚುನಾವಣೆ ಮುಂದೂಡಲು ಸರ್ಕಾರ ಯತ್ನಿಸುತ್ತಿದೆ' ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ ಎಸ್) ಪಕ್ಷವು ಟೀಕಿಸಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ, 'ವಾರ್ಡ್ ವಿಂಗಡಣೆ ನೆಪದಲ್ಲಿ ಪಾಲಿಕೆ ಕೋಟ್ಯಂತರ ಹಣ ವ್ಯರ್ಥ ಮಾಡಲಿದೆ. ಇದನ್ನೇ ಜನರ ಸಮಸ್ಯೆಗಳನ್ನು ಪರಿಹರಿಸಲು ಬಳಸಬಹುದಿತ್ತು. ಚುನಾವಣೆಗೆ ಬಿಜೆಪಿ ಸರ್ಕಾರ ಹೆದರುವಂತಿದೆ. ಈಗಿನ ನಿರ್ಧಾರ ಕೈಬಿಟ್ಟು ಕೂಡಲೇ ಪಾಲಿಕೆ ಚುನಾವಣೆ ನಡೆಸಬೇಕು. ವಾರ್ಡ್ ಮೀಸಲಾತಿ ಪಟ್ಟಿಯನ್ನು ಶೀಘ್ರವಾಗಿ ಪ್ರಕಟಿಸಬೇಕು' ಎಂದು ಆಗ್ರಹಿಸಿದ್ದಾರೆ.
'ಪಾಲಿಕೆ ಸದಸ್ಯರ ಅವಧಿ ಇದೇ 10ಕ್ಕೆ ಮುಗಿಯಲಿದ್ದು, ಈ ವೇಳೆಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಸಂವಿಧಾನಬಾಹಿರವಾಗಿ ಚುನಾವಣೆ ಮುಂದೂಡಲು ಹೊರಟಿದೆ' ಎಂದು ಪಕ್ಷದ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಮಂಜುನಾಥ್ ಆರೋಪಿಸಿದ್ದಾರೆ.