ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ ಲೋಕಸಭಾ ಕ್ಷೇತ್ರ: ‘ಸಕ್ಕರೆ’ ಜನರ ನಿರೀಕ್ಷೆ ಈಡೇರಿಸುವರೇ ಎಚ್‌ಡಿಕೆ?

ದಿಶಾ ಸಮಿತಿ, ಕೆಡಿಪಿ ಸೇರಿ ಅಭಿವೃದ್ಧಿ ಸಭೆಗಳಿಗೆ ನಿರಂತರ ಹಾಜರಿ ಬಯಸುವ ಜನ
Published 7 ಜೂನ್ 2024, 4:33 IST
Last Updated 7 ಜೂನ್ 2024, 4:33 IST
ಅಕ್ಷರ ಗಾತ್ರ

ಮಂಡ್ಯ: ನೂತನ ಸಂಸದರಾಗಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಜಿಲ್ಲೆಯ ಜನರು ಸಾಗರದಷ್ಟು ನಿರೀಕ್ಷೆಗಳಿನ್ನಿಟ್ಟುಕೊಂಡಿದ್ದಾರೆ. ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರೂ ಅವರು ಜಿಲ್ಲೆಯ ಜನರ ಜೊತೆ ನಿರಂತರ ಸಂಪರ್ಕವಿಟ್ಟುಕೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

ಜಿಲ್ಲೆಗೆ ದೊಡ್ಡ ಪರಂಪರೆ, ಹಿರಿದಾದ ಅಡಿಪಾಯವಿದ್ದರೂ ಇತ್ತೀಚೆಗೆ ಹಲವು ಕ್ಷೇತ್ರಗಳ ಬೆಳವಣಿಗೆ ತೀರಾ ಕುಸಿತ ಕಂಡಿದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಎತ್ತರಕ್ಕೇರಲು ಸಾಧ್ಯವಾಗಿಲ್ಲ. ಹಾಸನಕ್ಕೂ ಮಂಡ್ಯಕ್ಕೂ ಹೋಲಿಸಲಸಾಧ್ಯ. ಮೈಸೂರು ಒಡೆಯರ್‌, ನಂತರದ ಹಲವು ರಾಜಕಾರಣಿಗಳು ಕೊಟ್ಟ ಕೊಡುಗೆಗಳನ್ನೂ ಈಗಿನ ರಾಜಕಾರಣಿಗಳು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯರು ಕುಮಾರಸ್ವಾಮಿ ಅವರಿಂದ ದೊಡ್ಡದನ್ನೇ ನಿರೀಕ್ಷೆ ಮಾಡುತ್ತಿದ್ದಾರೆ.

ಕುಮಾರಸ್ವಾಮಿ ಅವರೇ ಹಲವು ಸಂದರ್ಭದಲ್ಲಿ ಹೇಳಿದ್ದಾರೆ, ‘ನಾನು ಸಿನಿಮಾ ಹಂಚಿಕೆ ಮಾಡುವ ಸಂದರ್ಭದಲ್ಲಿ ಮೈಸೂರು– ಬೆಂಗಳೂರು ನಡುವೆ ಓಡಾಡುತ್ತಿದ್ದೆ. ಮಂಡ್ಯ ಸಿಕ್ಕಾಗಲೆಲ್ಲಾ ಇಲ್ಲಿಯ ಸ್ಥಿತಿ ಕಂಡು ಮರುಗುತ್ತಿದ್ದೆ, ಮಂಡ್ಯ ಈಗಲೂ ದೊಡ್ಡಹಳ್ಳಿಯ ರೀತಿಯಲ್ಲೇ ಇದೆ’  ಎಂದಿದ್ದರು.

ಈಗ ಅವರೇ ಜಿಲ್ಲೆಯ ಸಂಸದರಾಗಿದ್ದು ಸಹಜವಾಗಿ ಬೆಟ್ಟದಷ್ಟು ನಿರೀಕ್ಷೆ ಇದೆ. ಚುನಾವಣೆಯ ಪ್ರಚಾರದುದ್ದಕ್ಕೂ ಅವರು ಕಾವೇರಿ, ಮೇಕೆದಾಟು, ನಗರದ ಅಭಿವೃದ್ಧಿ, ಸ್ಮಾರ್ಟ್‌ ಸಿಟಿ ಸೇರ್ಪಡೆ ಸೇರಿದಂತೆ ಹಲವು ಭರವಸೆಗಳನ್ನು ಕೊಟ್ಟಿದ್ದಾರೆ. ಎಲ್ಲಾ ಭರವಸೆಗಳನ್ನು ಯಾವ ರೀತಿಯಲ್ಲಿ ಈಡೇರಿಸಲಿದ್ದಾರೆ ಎಂಬುದನ್ನು ಜನರು ಕಾತರದಿಂದ ಕಾಯುತ್ತಿದ್ದಾರೆ.

‘ಜಿಲ್ಲೆಯ ಜನರು ಕುಮಾರಸ್ವಾಮಿ ಅವರಿಗೆ ಸಕ್ಕರೆಯನ್ನೇ ಕೊಟ್ಟಿದ್ದಾರೆ. ಮುಂದೆ ಅವರು ನಿರಂತರವಾಗಿ ದಿಶಾ ಸಮಿತಿ ಸಭೆ ನಡೆಸಬೇಕು. ಕೆಡಿಪಿ ಸಭೆಗಳಿಗೆ ತಪ್ಪದೇ ಹಾಜರಾಗಬೇಕು. ಸ್ಥಳೀಯ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳಬೇಕು’ ಎಂದು ಸಂಘಟನೆಯೊಂದರ ಮುಖಂಡರೊಬ್ಬರು ಒತ್ತಾಯಿಸಿದರು.

ಎಚ್‌ಡಿಕೆ ಇದಕ್ಕೂ ಮೊದಲು ಕನಕಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಆಗಿನ ಸಂದರ್ಭದಲ್ಲಿ ಅವರು ಹೇಳಿಕೊಳ್ಳುವಂತೆ ಪ್ರತಿನಿಧಿಸಿಲ್ಲ, ಸಂಸತ್‌ನಲ್ಲಿ ಮಾತು, ಉತ್ತಮ ಹಾಜರಾತಿಯೂ ಇರಲಿಲ್ಲ. ಆದರೆ ಈಗಿನ ಪರಿಸ್ಥಿತಿ ಬದಲಾಗಿದ್ದು ಅವರು ಶಾಸಕರಾಗಿ, 2 ಬಾರಿ ಮುಖ್ಯಮಂತ್ರಿಯಾಗಿ ಮಾಗಿದ್ದಾರೆ. ಈಗ ಅವರು ಸಂಸತ್‌ ಅಧಿವೇಶದನಲ್ಲಿ ಹೆಚ್ಚು ಪಾಲ್ಗೊಳ್ಳಬೇಕು, ಮಾತನಾಡಬೇಕು, ರಾಜ್ಯ, ಜಿಲ್ಲೆಯನ್ನು ಸಮರ್ಥವಾಗಿ ಪ್ರತಿನಿಧಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.

ರಾಮನಗರ ಹಾಗೂ ಮಂಡ್ಯ ಜಿಲ್ಲೆ ಭಾವನಾತ್ಮಕವಾಗಿ ಒಂದೇ ರೀತಿಯಲ್ಲಿದ್ದೂ ಆಡಳಿತಾತ್ಮಕವಾಗಿ ಸಂಪೂರ್ಣವಾಗಿ ಭಿನ್ನವಾಗಿದೆ. ಜಿಲ್ಲೆಯ ಜನರು ರಾಜಕಾರಣಿಗಳಿಂದ ಕೆಲಸ ಬಯಸುತ್ತಾರೆ, ತಮ್ಮ ಹಾಜರಾತಿ ಅಪೇಕ್ಷಿಸುತ್ತಾರೆ. ಜನರ ಭಾವನೆಗಳಿಗೆ ಸ್ಪಂದಿಸದಿದ್ದರೆ ಅಂತಹ ಜನಪ್ರತಿನಿಧಿಗಳಿಗೆ ಜನರು ತಕ್ಕ ಪಾಠ ಕಲಿಸಿದ ಉದಾಹರಣೆಗಳೂ ಇವೆ.

ಎಚ್‌ಡಿಕೆ ರಾಮನಗರ, ಚನ್ನಪಟ್ಟಣದಲ್ಲಿ ಶಾಸಕರಾಗಿ ಕೆಲಸ ಮಾಡಿದರೂ ಆಡಳಿತಾತ್ಮಕ ಚಟುವಟಿಕೆ, ಸಾರ್ವಜನಿಕ ಸಭೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪಾಲ್ಗೊಂಡಿಲ್ಲ, ಗೆದ್ದ ನಂತರ ಅವರು ಹೊರಗೆ ಇದ್ದದ್ದೇ ಹೆಚ್ಚು. ಕ್ಷೇತ್ರಕ್ಕೆ ಬಾರದಿದ್ದರೂ ಅವರಿಗೆ ಅಲ್ಲಿ ಯಾವುದೇ ರೀತಿಯ ತೊಂದರೆಗಳಾಗಿಲ್ಲ. ಆದರೆ ಮಂಡ್ಯದಲ್ಲಿ ಅಂತಹ ಪರಿಸ್ಥಿತಿ ಇಲ್ಲ, ಅವರ ಪ್ರತಿ ಹೆಜ್ಜೆ ಕೂಡ ತನ್ನದೇ ಆದ ಗುರುತು ಮೂಡಿಸುತ್ತದೆ ಎಂಬ ಮಾತುಗಳು ಸ್ಥಳೀಯ ವಲಯದಲ್ಲಿವೆ.

‘ಕುಮಾರಸ್ವಾಮಿ ಅವರು ಅಧಿಕಾರಿ ವಲಯವನ್ನು ಸಮರ್ಥವಾಗಿ ನಿಭಾಯಿಸುತ್ತಾರೆ, ಅದರಲ್ಲಿ ಎರಡು ಮಾತಿಲ್ಲ. ಆದರೆ ಜಿಲ್ಲೆ ಜನರನ್ನು ನಿರ್ವಹಣೆ ಮಾಡುವುದೇ ದೊಡ್ಡ ಸವಾಲು’ ಎಂದು ರೈತಸಂಘದ ಮುಖಂಡರೊಬ್ಬರು ಹೇಳಿದರು.

ಮದುವೆ ಬೀಗರೂಟಕ್ಕೆ ಬರಲೇಬೇಕು...

ಜಿಲ್ಲೆಯಲ್ಲಿ ನಡೆಯುವ ಅದ್ಧೂರಿ ಮದುವೆ ಅಬ್ಬರದ ಬೀಗರೂಟ ಸಮಾರಂಭಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸುವುದು ಇಲ್ಲಿಯ ಜನರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಆಹ್ವಾನ ಪತ್ರಿಕೆಗೆ ರಾಜಕಾರಣಿಗಳ ಹೆಸರು ಮುದ್ರಿಸುವುದು ವಾಡಿಕೆ. ರಾಜಕಾರಣಿಗಳ ಭೇಟಿಯಲ್ಲಿ ಜನ ಸಂಭ್ರಮಿಸುತ್ತಾರೆ. ಕುಮಾರಸ್ವಾಮಿ ಅವರನ್ನು ಪ್ರೀತಿಸುವ ಜನರು ಜಿಲ್ಲೆಯಲ್ಲಿ ಹೆಚ್ಚಿದ್ದು  ಅವರು ಮದುವೆ ಬೀಗರೂಟಗಳಿಗೆ ಬರುವುದು ಅನಿವಾರ್ಯ. ಜೊತೆಗೆ ಸಾವು ತಿಥಿ ಸಮಾರಂಭಗಳಿಗೂ ರಾಜಕಾರಣಿಗಳ ಭೇಟಿಯನ್ನೂ ಜನರು ನಿರೀಕ್ಷಿಸುತ್ತಾರೆ. ‘ಮದುವೆ ಬೀಗರೂಟ ಸಾವು ತಿಥಿ ಸಮಾರಂಭಗಳೀಗೆ ಭೇಟಿ ನೀಡಿಯೇ ಚುನಾವಣೆಗಳಲ್ಲಿ ಯಶಸ್ವಿಯಾದ ರಾಜಕಾರಣಿಗಳ ಪಟ್ಟಿಯೇ ಇಲ್ಲಿದೆ. ಕುಮಾರಸ್ವಾಮಿ ತಾವು ಬಾರದಿದ್ದರೂ ಪುತ್ರ ನಿಖಿಲ್‌ ಪತ್ನಿ ಅನಿತಾ ಅವರನ್ನಾದರೂ ಕಳುಹಿಸಿ ಜನರ ಬಯಕೆ ಈಡೇರಿಸಬೇಕು’ ಎಂದು ಮುಖಂಡರೊಬ್ಬರು ತಿಳಿಸಿದರು.

ಕಾಂಗ್ರೆಸ್‌ನವರ ಜೊತೆ ಗದ್ದಲ ಬೇಡ

‘ಕ್ಷೇತ್ರದಲ್ಲಿ ಒಬ್ಬರು ಸಚಿವ 6 ಕಾಂಗ್ರೆಸ್‌ ಶಾಸಕರಿದ್ದಾರೆ. ಸಭೆ ಸಮಾರಂಭಗಳಲ್ಲಿ ಕುಮಾರಸ್ವಾಮಿ ಅವರು ವೈಯಕ್ತಿಕ ರಾಜಕೀಯವಾದ ಯಾವುದೇ ದ್ವೇಷ ಗದ್ದಲ ವಾಗ್ವಾದ ಮಾಡಿಕೊಳ್ಳದೆ ಪಾರದರ್ಶಕವಾಗಿ ಕೆಲಸ ಮಾಡಬೇಕು’ ಎಂದು ಜೆಡಿಎಸ್‌ ಮುಖಂಡರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT