ಮಂಡ್ಯ: ‘ಬಿಜೆಪಿ– ಜೆಡಿಎಸ್ ಮೈತ್ರಿ ಟಿಕೆಟ್ ನನಗೇ ಶೇ 100ರಷ್ಟು ಸಿಗುತ್ತದೆ ಎಂಬ ವಿಶ್ವಾಸವಿದೆ. ನಟರಾದ ಯಶ್– ದರ್ಶನ್ ಅವರು ನನ್ನ ಪರವಾಗಿ ಪ್ರಚಾರಕ್ಕೆ ಈ ಬಾರಿಯೂ ಬಂದರೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ’ ಎಂದು ಸಂಸದೆ ಸುಮಲತಾ ಭಾನುವಾರ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೇನೆ. ಭಾನುವಾರವಾಗಿದ್ದ ಕಾರಣ ಅವರನ್ನು ಮಠದಲ್ಲೇ ಭೇಟಿಯಾಗಿ ಮಾತುಕತೆ ನಡೆಸಿದೆ. ಚುನಾವಣೆ ಉದ್ದೇಶದಿಂದ ಸ್ವಾಮೀಜಿಯನ್ನು ಭೇಟಿಯಾಗಿಲ್ಲ’ ಎಂದರು.
‘ಕರ್ನಾಟಕದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದಾಗ ನನ್ನ ಹೆಸರೂ ಇರಲಿದೆ ಎಂಬ ವಿಶ್ವಾಸವಿದೆ. ಟಿಕೆಟ್ಗಾಗಿ ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ, ಈ ಬಾರಿ ಬಿಜೆಪಿ ಚಿನ್ಹೆಯಡಿ ಸ್ಪರ್ಧಿಸುತ್ತಿರುವ ಕಾರಣ ಹೆಚ್ಚು ಬಲ ಬರಲಿದೆ’ ಎಂದರು.
‘ಯಶ್– ದರ್ಶನ್ ಅವರು ಕಳೆದ ಬಾರಿ ನನಗಾಗಿ 25 ದಿನ ತ್ಯಾಗ ಮಾಡಿದ್ದರು. ಪದೇ ಪದೇ ಎಲ್ಲಾ ಕೆಲಸ ಬಿಟ್ಟು ಬನ್ನಿ ಎಂದು ಕರೆಯಲು ಮನಸ್ಸು ಒಪ್ಪುತ್ತಿಲ್ಲ. ಅವರು ಈ ಬಾರಿಯೂ ಬಂದರೆ ನನಗೆ ದೊಡ್ಡ ಶಕ್ತಿಯಾಗುತ್ತದೆ. ಅವರಿಬ್ಬರೂ ನನ್ನ ಮನೆಯ ಮಕ್ಕಳ ರೀತಿಯಲ್ಲಿ ಓಡಾಡಿ ಪ್ರಚಾರ ಮಾಡಿದ್ದರು’ ಎಂದರು.