ಕಿಕ್ಕೇರಿ: ಮಳೆಗಾಗಿ ಪ್ರಾರ್ಥಿಸಿ ಜಾನಪದ ಸಂಸ್ಕೃತಿಯಲ್ಲಿನ ನಂಬಿಕೆಯಂತೆ ಮಕ್ಕಳಿಗೆ ತಿಂಗಳಮಾಮನ ಮದುವೆ ಹೋಬಳಿಯ ಮಾದಾಪುರ ಗ್ರಾಮದಲ್ಲಿ ಮಾಡಲಾಯಿತು.
ಹೋಬಳಿಯ ಮಾದಾಪುರ ಗ್ರಾಮದಲ್ಲಿ ಇಡೀ ಗ್ರಾಮಸ್ಥರು ಒಂದಾಗಿ ಈ ಬಾರಿಯಾದರೂ ಮಳೆಬರಲಿ ಎಂದು ಚಂದಿರನ ಪ್ರಾರ್ಥಿಸಿ ವಿಶೇಷವಾಗಿ ಚಂದಮಾಮನ ಹೆಸರಿನಲ್ಲಿ ವಿವಾಹ ನಡೆಸಲು ಈಚೆಗೆ ಮುಂದಾದರು.
ಗ್ರಾಮದಲ್ಲಿನ ಮಕ್ಕಳನ್ನು ಒಂದೆಡೆ ಕಲೆ ಹಾಕಿ ಮದುವೆ ಶಾಸ್ತ್ರ ಮಾಡಲು ಸಜ್ಜಾದರು. ಮದುವೆಯಲ್ಲಿ ವರ ಹಾಗೂ ವಧುವಾಗಿ ಇಬ್ಬರನ್ನು ಗಂಡು ಮಕ್ಕಳನ್ನೆ ಆಯ್ಕೆ ಮಾಡಲಾಯಿತು. ಕಾರ್ತಿಕ್ ಮದುಮಗನಾದರೆ, ಚಿರಾಗ್ ಮದುಮಗಳಾಗಿ ಸಜ್ಜಾದರು. ಚಿರಾಗ್ಗೆ ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಶೃಂಗರಿಸಿದರು.
ಮನೆ ಮನೆಗಳಲ್ಲಿ ಮಕ್ಕಳು ರೊಟ್ಟಿ ಹಿಟ್ಟನ್ನು ತಂದು ಒಂದೆಡೆ ಸೇರಿಸಿ ರೊಟ್ಟಿ ತಯಾರಿಸಲು ಸಜ್ಜಾದರು. 9 ದಿನಗಳ ಕಾಲ ನಡೆದ ಮದುವೆ ಶಾಸ್ತ್ರದಲ್ಲಿ ದಿನಕ್ಕೊಂದು ರೊಟ್ಟಿಯಂತೆ 9 ರೊಟ್ಟಿ, 9 ಹೋಳಿಗೆ ತಯಾರಿಸಲಾಯಿತು. ರೊಟ್ಟಿಯ ಮೇಲೆ ಚಂದಿರನ ಚಿತ್ತಾರ ಬಿಡಿಸಿದರು. ಪರಸ್ಪರ ರೊಟ್ಟಿ ಕಸಿಯಲು ಯತ್ನಿಸಿದರು. ಅಂತಿಮವಾಗಿ ಒಂದೆಡೆ ಕಲೆತು ಮಳೆರಾಯನ ಕುರಿತು ಹಾಡಿದರು. ನೃತ್ಯ ಮಾಡಿ ಬಾರೋ ಮಳೆರಾಯ ಎಂದು ಕರೆದರು. ಪರಸ್ಪರ ನೀರು ಎರಚಾಡಿ ಸಂಭ್ರಮಿಸಿದರು. ಊರಿನ ಗ್ರಾಮಸ್ಥರು ಇದಕ್ಕೆ ಸಾಥ್ ನೀಡಿದರು.
ಗ್ರಾಮದಲ್ಲಿ ಮದುವೆ ಸಮಾರಂಭದಂತೆ ನಗುತ್ತ ವಿವಿಧ ಶಾಸ್ತ್ರ, ತಾಳಿ ಶಾಸ್ತ್ರ ಎಲ್ಲವನ್ನು ಮಾಡಿ ಖುಷಿಪಟ್ಟರು.
ಗ್ರಾಮದ ಮುಖಂಡರಾದ ಪುಟ್ಟಕ್ಕ, ಕಾಳಮ್ಮ, ಭಾಗ್ಯ, ನಿರ್ಮಲಾ, ಶಾಂತಲಾ, ಸವಿತಾ, ಲಕ್ಷ್ಮೀ, ಸುರೇಶ್, ಶಿವಶಂಕರ್, ನಾಗೇಗೌಡ, ಯೋಗೇಶ್, ನಿತೀಶ್ ಪಾಲ್ಗೋಂಡು, ಮದುವೆ ಪೌರೋಹಿತ್ಯವನ್ನು ಟೈಲರ್ ರಘು ಉಸ್ತುವಾರ ವಹಿಸಿದ್ದರು.
ಕಿಕ್ಕೇರಿ ಹೋಬಳಿಯ ಮಾದಾಪುರ ಗ್ರಾಮದಲ್ಲಿ ಸೋಮವಾರ ಮಳೆಗಾಗಿ ಚಂದಮಾಮನ ಮದುವೆಯಾಗಿ ಮಕ್ಕಳ ಮದುವೆ ಮಾಡಲಾಯಿತು