ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಷುಗರ್‌ ಕಾರ್ಮಿಕರ ಸಂಬಳಕ್ಕಾಗಿ ಹಳೆಯ ವಸ್ತುಗಳ ಮಾರಾಟ: ದುಸ್ಥಿತಿಗೆ ರೈತರ ಮರುಕ

ಮೈಷುಗರ್‌ ಕಾರ್ಖಾನೆ; 2020 ಆಗಸ್ಟ್‌ನಿಂದ ಸಂಬಳ ಕೊಟ್ಟಿಲ್ಲ, ನಿವೃತ್ತಿ ಭತ್ಯೆ ವಿತರಣೆಯಾಗಿಲ್ಲ
Last Updated 6 ಫೆಬ್ರುವರಿ 2021, 10:42 IST
ಅಕ್ಷರ ಗಾತ್ರ

ಮಂಡ್ಯ: ಮೈಷುಗರ್ ಕಾರ್ಖಾನೆಯ ಕಾರ್ಮಿಕರಿಗೆ ಸಂಬಳ ಕೊಡಲು ಕಾರ್ಖಾನೆ ಆವರಣದಲ್ಲಿರುವ ಹಳೆಯ ವಸ್ತುಗಳ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸರ್ಕಾರಿ ಸ್ವಾಮ್ಯದ ಪ್ರಮುಖ ಕಾರ್ಖಾನೆ ಎಂಬ ಕೀರ್ತಿಗೆ ಪಾತ್ರವಾಗಿದ್ದ ಐತಿಹಾಸಿಕ ಕಂಪನಿಗೆ ಈ ದುಸ್ಥಿತಿ ಬಂದಿರುವುದನ್ನು ಕಂಡು ರೈತರು, ಕಾರ್ಮಿಕರು ಮರುಕ ವ್ಯಕ್ತಪಡಿಸುತ್ತಾರೆ.

ಸರ್ಕಾರ ಕಾರ್ಖಾನೆಯನ್ನು ಖಾಸಗಿ ಗುತ್ತಿಗೆ ನೀಡಲು ತುದಿಗಾಲ ಮೇಲೆ ನಿಂತಿದೆ. ರೈತರ ವಿರೋಧದ ನಡುವೆಯೂ 40 ವರ್ಷಗಳವರೆಗೆ ಖಾಸಗಿ ಗುತ್ತಿಗೆ ಆದೇಶ ಹೊರಡಿಸಿದೆ. ಮುಚ್ಚಿರುವ ಕಾರ್ಖಾನೆಯ ಕಾರ್ಮಿಕರಿಗೆ 2020 ಆಗಸ್ಟ್‌ನಿಂದ ಸಂಬಳ ನೀಡಿಲ್ಲ. ಕಾರ್ಮಿಕರು ಸಾಕಷ್ಟು ಬಾರಿ ಒತ್ತಾಯ ಮಾಡಿದರೂ ವೇತನ ಬಿಡುಗಡೆ ಮಾಡಿಲ್ಲ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಆಡಳಿತ ಮಂಡಳಿ ಹಳೆಯ ವಸ್ತುಗಳನ್ನು ಮಾರಾಟ ಮಾಡುತ್ತಿದೆ.

ಕಾರ್ಖಾನೆ ಆವರಣದಲ್ಲಿ ತುಕ್ಕು ಹಿಡಿಯುತ್ತಿರುವ ಅಪಾರ ಪ್ರಮಾಣದ ಹಳೆಯ ವಸ್ತುಗಳ ರಾಶಿಯೇ ಇದೆ. 2018ರಲ್ಲೇ ಹಳೆಯ ವಸ್ತುಗಳ ಮಾರಾಟಕ್ಕೆ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿತ್ತು. ಆದರೆ ಇಲ್ಲಿಯವರೆಗೂ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಕಾರ್ಮಿಕರ ಸಂಬಳ ಬಿಡುಗಡೆ ಮಾಡಲು ಸರ್ಕಾರ ನಿರಾಕರಿಸಿರುವ ಕಾರಣ ಅನಿವಾರ್ಯವಾಗಿ ಆಡಳಿತ ಮಂಡಳಿ ಹಳೆ ವಸ್ತುಗಳ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಕಾರ್ಖಾನೆಗೆ ಪುನಶ್ಚೇತನ ನೀಡಲು ವಿವಿಧ ಸರ್ಕಾರಗಳು ₹ 500 ಕೋಟಿಗಿಂತ ಹೆಚ್ಚು ಹಣ ನೀಡಿವೆ. ಪ್ರತಿ ಬಾರಿ ಹಣ ಬಿಡುಗಡೆಯಾದಾಗ ಹೊಸಹೊಸ ಬೃಹತ್‌ ಯಂತ್ರಗಳನ್ನು ಖರೀದಿ ಮಾಡಲಾಗಿದೆ. ಹಳೆಯ ಯಂತ್ರಗಳು, ರೋಲರ್‌, ಕಟರ್‌, ವಾಲ್ವ್‌ಗಳು, ಬೇರಿಂಗ್‌ಗಳ ರಾಶಿಯೇ ಕಾರ್ಖಾನೆಯ ಆವರಣದಲ್ಲಿದೆ. ₹ 20 ಕೋಟಿ ಮೌಲ್ಯದ ಹಳೆಯ ವಸ್ತುಗಳಿವೆ ಎಂದು ಅಂದಾಜು ಮಾಡಲಾಗಿದೆ.

ಹಳೆಯ ವಸ್ತುಗಳು ದರ ನಿಗದಿ ಹಾಗೂ ಮಾರಾಟ ಮಾಡುವ, ಕೇಂದ್ರ ಸರ್ಕಾರದ ಅಧೀನ ಎಂಎಸ್‌ಟಿಸಿ (ಮೆಟಲ್‌ ಸ್ಕ್ರ್ಯಾಪ್‌ ಟ್ರೇಡ್‌ ಕಾರ್ಪೊರೇಷನ್‌) ಸಂಸ್ಥೆಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ. ಒಟ್ಟು ಮೌಲ್ಯದಲ್ಲಿ ಶೇ 3ರಷ್ಟನ್ನು ಈ ಸಂಸ್ಥೆ ಕಮೀಷನ್‌ ಪಡೆಯಲಿದೆ. ಮಿಮ್ಸ್‌ ಸಿಬ್ಬಂದಿ ಹಳೆಯ ವಸ್ತುಗಳ ರಾಶಿಯ (ಲಾಟ್‌) ವಿವರ ನೀಡಿದರೆ ಮುಂದಿನ ಪ್ರಕ್ರಿಯೆಯನ್ನು ಎಂಎಸ್‌ಟಿಸಿ ಸಂಸ್ಥೆಯ ಸಿಬ್ಬಂದಿ ನಿರ್ವಹಣೆ ಮಾಡುತ್ತಾರೆ.

ಆನ್‌ಲೈನ್‌ ಮೂಲಕ ಟೆಂಡರ್‌ ಆಹ್ವಾನಿಸಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಇಲ್ಲಿಯವರೆಗೆ ₹ 3 ಕೋಟಿ ಮೌಲ್ಯದ ವಸ್ತುಗಳನ್ನು ಮಾರಾಟ ಮಾಡಲಾಗಿದೆ. ಈ ಹಣದಲ್ಲಿ ಕಾರ್ಮಿಕರಿಗೆ ಸಂಬಳ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

100ಕ್ಕೂ ಹೆಚ್ಚು ಮಂದಿ ಕಾರ್ಮಿಕರಿಗೆ ಸಂಬಳ ಏಳೆಂಟು ತಿಂಗಳ ಸಂಬಳ ಬಾಕಿ ಉಳಿದಿದೆ. ಎಲ್ಲಕ್ಕಿಂತ ಹೆಚ್ಚಾಗಿ 2014ರಿಂದ ನಿವೃತ್ತಿ ಹೊಂದಿದ ಕಾರ್ಮಿಕರಿಗೆ, ಕಡ್ಡಾಯ ನಿವೃತ್ತಿ ಪಡೆದ ಕಾರ್ಮಿಕರಿಗೆ ನಿವೃತ್ತಿ ಭತ್ಯೆ, ಗ್ರಾಚ್ಯುಟಿ, ಇತರ ಸೌಲಭ್ಯ ನೀಡಿಲ್ಲ. 200 ರ್ಕಾಮಿಕರು ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ.

‘ಆದಷ್ಟು ಬೇಗ ಸೌಲಭ್ಯ ವಿತರಣೆ ಮಾಡಿದರೆ ನಾವು ಕಾರ್ಖಾನೆಯಿಂದ ಮುಕ್ತಿ ಪಡೆಯುತ್ತೇವೆ. ಖಾಸಗಿಯವರಿಗೆ ವಹಿಸುತ್ತಿರುವ ಕಾರಣ ಹಳೇ ವಸ್ತು ಮಾರಿ ಬಾಕಿ ಚುಕ್ತ ಮಾಡುತ್ತಿದ್ದಾರೆ’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

‘ಹಲವು ವರ್ಷಗಳ ಕಾಲ ಸಾವಿರಾರು ಕಾರ್ಮಿಕರು, ರೈತರು, ವ್ಯಾಪಾರಿಗಳಿಗೆ ಜೀವನಾಧಾರವಾಗಿದ್ದ ಕಾರ್ಖಾನೆ ಬಳಿ ಈಗ ಸಂಬಳ ಕೊಡಲು ಹಣ ಇಲ್ಲ ಎಂದರೆ ನೋವಾಗುತ್ತದೆ. ಎಲ್ಲಾ ಸರ್ಕಾರಗಳು ಐತಿಹಾಸಿಕ ಕಾರ್ಖಾನೆಯನ್ನು ಇಂಚಿಂಚು ಕೊಂದಿವೆ’ ರೈತ ಶಿವರಾಮು ನೋವು ವ್ಯಕ್ತಪಡಿಸಿದರು.

ಮಾರಾಟ ಪ್ರಶ್ನಿಸಿದ ರೈತ ಮುಖಂಡರು

‘ಹಳೆಯ ವಸ್ತುಗಳ ಮಾರಾಟದ ಹೆಸರಿನಲ್ಲಿ ಬಳಕೆಗೆ ಯೋಗ್ಯವಾಗಿರುವ ವಸ್ತುಗಳನ್ನೂ ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನವಿದೆ. ಕಾರ್ಖಾನೆ ಆವರಣದಲ್ಲಿ ಲಾರಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿವೆ. ಕಾರ್ಖಾನೆಗೆ ಭದ್ರತೆಯೂ ಇಲ್ಲವಾಗಿದೆ, ಚಲನಚಿತ್ರಿ ಶೂಟಿಂಗ್‌ ನಡೆಯುತ್ತಿದ್ದು ಅಲ್ಲಿ ಹೇಳುವವರು, ಕೇಳುವವರು ಇಲ್ಲವಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ನಡೆಸಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

‘ಬಹಿರಂಗ ಟೆಂಡರ್‌ ಮೂಲಕವೇ ಹಳೇ ವಸ್ತು ಮಾರುತ್ತಿದ್ದೇವೆ. ಕಾರ್ಖಾನೆ ಆವರಣದಲ್ಲಿ ಪೊಲೀಸ್‌ ಠಾಣಾ ಚೌಕಿ ಇದೆ. 30 ಮಂದಿ ಗೃಹರಕ್ಷಕ ದಳದ ಸಿಬ್ಬಂದಿ ಇದ್ದಾರೆ. ಭದ್ರತೆ ವೈಫಲ್ಯವಾಗಿಲ್ಲ’ ಎಂದು ಮೈಷುಗರ್‌ ಕಾರ್ಖಾನೆ ಅಧ್ಯಕ್ಷ ಶಿವಲಿಂಗೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT