ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದ ಐತಿಹಾಸಿಕ ಕಾರ್ಖಾನೆ 'ಮೈಷುಗರ್‌'; 40 ವರ್ಷಗಳವರೆಗೆ ಖಾಸಗಿ ಗುತ್ತಿಗೆ

ಪಿಎಸ್‌ಎಸ್‌ಕೆ ಮಾದರಿಯಲ್ಲೇ ಖಾಸಗಿ ವ್ಯಕ್ತಿಗಳ ಪಾಲಾಗಲಿದೆ ಐತಿಹಾಸಿಕ ಕಾರ್ಖಾನೆ
Last Updated 20 ನವೆಂಬರ್ 2020, 16:15 IST
ಅಕ್ಷರ ಗಾತ್ರ

ಮಂಡ್ಯ: ರೈತರು, ರೈತ ಮುಖಂಡರ ವಿರೋಧದ ನಡುವೆಯೂ ಸರ್ಕಾರ ಐತಿಹಾಸಿಕ ಮೈಷುಗರ್‌ ಕಾರ್ಖಾನೆಯನ್ನು 40 ವರ್ಷಗಳವರೆಗೆ ಖಾಸಗಿ ಗುತ್ತಿಗೆಗೆ ನೀಡಲು ನಿರ್ಧಾರ ಕೈಗೊಂಡಿದೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ಮಾದರಿಯಲ್ಲೇ ಮೈಷುಗರ್‌ ಕೂಡ ಖಾಸಗಿ ವ್ಯಕ್ತಿಗಳ ಪಾಲಾಗಲಿದೆ.

ಈ ಹಿಂದೆ ಕೂಡ ಸರ್ಕಾರ ಖಾಸಗಿ ಗುತ್ತಿಗೆಗೆ ನೀಡಲು ನಿರ್ಧಾರ ಕೈಗೊಂಡಿತ್ತು. ಆದರೆ ರೈತರು ವಿರೋಧ ವ್ಯಕ್ತಪಡಿಸಿದ ಕಾರಣ ಕಾರ್ಖಾನೆಯನ್ನು ಸರ್ಕಾರಿ ಸ್ವಾಧೀನದಲ್ಲೇ ಉಳಿಸಿಕೊಂಡು ಒ ಅಂಡ್‌ ಎಂ (ಕಾರ್ಯಾಚರಣೆ ಮತ್ತು ನಿರ್ವಹಣೆ) ಮಾದರಿಯಲ್ಲಿ ನಡೆಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ನಿರ್ಧಾರವನ್ನು ಕಬ್ಬು ಬೆಳೆಗಾರರ ಒಕ್ಕೂಟ ಸ್ವಾಗತಿಸಿತ್ತು, ಆದರೆ ರೈತ ಹಿತರಕ್ಷಣಾ ಸಮಿತಿ ವಿರೋಧಿಸಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಯಬೇಕು ಎಂದು ಒತ್ತಾಯಿಸಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ ಕೂಡ ಒ ಅಂಡ್‌ ಎಂ ಮಾದರಿಯಲ್ಲೇ ಕಾರ್ಖಾನೆ ಆರಂಭವಾಗಲಿದೆ ಎಂದು ತಿಳಿಸಿದ್ದರು. ಆದರೆ ಈಗ 40 ವರ್ಷಗಳವರೆಗೆ ಖಾಸಗಿ ಗುತ್ತಿಗೆ ನೀಡಲು ಸರ್ಕಾರ ಆದೇಶಿಸಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಖಾಸಗಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡುವ ಅಥವಾ ಒ ಅಂಡ್‌ ಎಂ ನಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲು ಜೂ.25ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ಉಪ ಸಮಿತಿಯನ್ನು ರಚನೆ ಮಾಡಲಾಗಿತ್ತು. ಕಾರ್ಖಾನೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಖಾಸಗಿ ಗುತ್ತಿಗೆ ನೀಡಲಾಗಿದೆ ಸಮಿತಿಯೇ ತೀರ್ಮಾನ ಕೈಗೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಂತ್ರಿಕ ವರದಿ ಶಿಫಾರಸು: ಕಾರ್ಖಾನೆಗೆ ಪುನಶ್ಚೇತನ ನೀಡುವ ಕುರಿತು ಪುಣೆಯ ಮಿಟ್ಕಾನ್‌ ಕನ್ಸಲ್ಟೆನ್ಸಿ ಮತ್ತು ಎಂಜಿನಿಯರಿಂಗ್‌ ಸರ್ವೀಸಸ್‌ ನೀಡಿರುವ ತಾಂತ್ರಿಕ ವರದಿಯಲ್ಲಿ ಖಾಸಗಿ ಗುತ್ತಿಗೆಯನ್ನೇ ಶೀಫಾರಸು ಮಾಡಲಾಗಿದೆ. ಇದರ ಅನ್ವಯ ಉಪ ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ಖಾಸಗಿ ಗುತ್ತಿಗೆಗೆ ನೀಡಲು ನಿರ್ಧಾರ ಕೈಗೊಂಡಿದೆ ಎಂದು ತಿಳಿಸಲಾಗಿದೆ.

ಕಾರ್ಖಾನೆ 2005ರಿಂದ ರೋಗಗ್ರಸ್ತಗೊಂಡಿದೆ. 2015–16, 2016–17, 2018–19ನೇ ಸಾಲಿನಲ್ಲಿ ಕಬ್ಬು ನುರಿಯುವುದನ್ನು ಸ್ಥಗಿತಗೊಳಿಸಲಾಗಿದೆ. ಕಂಪನಿಯ ಹೆಸರಿನಲ್ಲಿ ₹ 103 ಕೋಟಿಯಷ್ಟು ಸಾಲವಿದೆ. 2014ರಿಂದಲೂ ₹ 522 ಕೋಟಿ ಹಣ ನೀಡಿದರೂ ಕಾರ್ಖಾನೆ ಆರಂಭಿಸಲು ಸಾಧ್ಯವಾಗಿಲ್ಲ. ಕಾರ್ಖಾನೆ ವ್ಯಾಪ್ತಿಯಲ್ಲಿರುವ 8.21 ಲಕ್ಷ ಟನ್‌ ಕಬ್ಬು ನುರಿಯಲು ಸಾಧ್ಯವಾಗಿಲ್ಲ. ರೈತರ ಹಿತ ಕಾಯುವ ದೃಷ್ಟಿಯಿಂದ ಕಾರ್ಖಾನೆಯನ್ನು ಗುತ್ತಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ವರದಿ ನಿಜವಾಯ್ತು

‘ಖಾಸಗಿ ಸಂಸ್ಥೆಯೊಂದರ ತಾಂತ್ರಿಕ ವರದಿ ಪರಿಗಣಿಸಿ ಸರ್ಕಾರ ಮೈಷುಗರ್‌ ಕಾರ್ಖಾನೆಯನ್ನು ಖಾಸಗಿ ಗುತ್ತಿಗೆಗೆ ನೀಡಲಿದೆ ಎಂದು 4 ತಿಂಗಳ ಹಿಂದೆಯೇ ಪ್ರಜಾವಾಣಿ ಪತ್ರಿಕೆ ವರದಿ ಮಾಡಿತ್ತು, ವರದಿ ಈಗ ನಿಜವಾಗಿದೆ. ಸರ್ಕಾರದ ನಿರ್ಧಾರ ಒಪ್ಪಲು ಸಾಧ್ಯವಿಲ್ಲ. ಮುಂದಿನ ಹೆಜ್ಜೆ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್‌ ಹೇಳಿದರು.

‘ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ರಾಜಮಹರಾಜರು ಕಟ್ಟಿರುವ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಸರ್ಕಾರದ ನಿರ್ಧಾರದ ಬಗ್ಗೆ ಕಾನೂನು ಹೋರಾಟವನ್ನೂ ಮಾಡಲಾಗುವುದು. ಈ ಬಗ್ಗೆ ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು’ ಎಂದು ರೈತ ಹಿತರಕ್ಷಣಾ ಸಮಿತಿ ಸುನಂದಾ ಜಯರಾಂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT