ಶ್ರೀರಂಗಪಟ್ಟಣ: ‘ಆರ್ಎಸ್ಎಸ್ ಇತರ ಹಿಂದೂಪರ ಸಂಘಟನೆ ಗೂ ಬಿಜೆಪಿ ಕಾರ್ಯಕರ್ತರು ಟಿಪ್ಪು ಸುಲ್ತಾನನ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿದ್ದು, ಕಪ್ಪು ಸುಳ್ಳು ಹೇಳುತ್ತಿದ್ದಾರೆ’ ಎಂದು ಇತಿಹಾಸ ಸಂಶೋಧಕ ಪ್ರೊ.ಪಿ.ವಿ. ನಂಜರಾಜ ಅರಸ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸಾಹಿತಿಗಳ ಜತೆಗೂಡಿ ಸ್ಮಾರಕಗಳನ್ನು ವೀಕ್ಷಿಸಿ ಮಾತನಾಡಿದ ಅವರು, ‘ಟಿಪ್ಪು ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಆತನನ್ನು ಹಳದಿ ಕಣ್ಣುಗಳಿಂದ ನೋಡಲಾಗುತ್ತಿದೆ. ಕೊಡಗಿನಲ್ಲಿ 90 ಸಾವಿರ ಹಿಂದೂಗಳನ್ನು ಕೊಂದ ಎಂದು ಹಸಿ ಸುಳ್ಳು ಹೇಳುತ್ತಿದ್ದಾರೆ. 2015ರಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಶುರುವಾದ ಬಳಿಕ ಹಿಂದೂಪರ ಸಂಘಟನೆಗಳು ರಾಷ್ಟ್ರದ್ರೋಹಿ ಎಂದು ಹೇಳಲು ಶುರು ಮಾಡಿದವು. ಮೈಸೂರು ಹುಲಿಯಾಗಿದ್ದವನು ಅವರ ಕಣ್ಣಿಗೆ ಕೇವಲ ಮುಸಲ್ಮಾನನಾಗಿ ಕಾಣುತ್ತಿದ್ದಾನೆ’ ಎಂದು ಹೇಳಿದರು.
‘ಟಿಪ್ಪು ಹಿಂದೂ ಆಗಿದ್ದರೆ ಭಾರತರತ್ನ ಪ್ರಶಸ್ತಿ ಕೊಡಿ ಎಂದು ಒತ್ತಾಯಿಸುತ್ತಿದ್ದರು. ಟಿಪ್ಪುವನ್ನು ಆ ಕಾಲಘಟ್ಟದ ರಾಜನಾಗಿ ನೋಡಬೇಕು. ಬ್ರಿಟಿಷ್ ಬರಹಗಾರ ಕರ್ನಲ್ ವಿಲ್ಕ್ಸ್ 4ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಭಾಗಿಯಾಗಿದ್ದು, ಆತ ಟಿಪ್ಪು ಸುಲ್ತಾನನ ಬಗ್ಗೆ ನೈಜ ಸಂಗತಿಗಳನ್ನು ದಾಖಲಿಸಿದ್ದಾನೆ. ಒಬ್ಬ ವ್ಯಕ್ತಿ, ಒಂದು ಘಟನೆ ಬಗ್ಗೆ ಮಾತನಾಡುವಾಗ ಸತ್ಯ ಶೋಧನೆ ಮಾಡಬೇಕು. ಹಿಟ್ಲರ್ ಆಸ್ಥಾನಿಕ ಗೊಬೆಲ್ಸ್ ರೀತಿ ಸುಳ್ಳನ್ನು ಸತ್ಯ ಎಂದು ಒಪ್ಪಿಸುವ ಹುನ್ನಾರ ಮಾಡಬಾರದು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಓಡಿಸಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.
ಡಾ.ಕೆ.ವೈ. ಶ್ರೀನಿವಾಸ್, ಕುಂತಿಬೆಟ್ಟ ಚಂದ್ರಶೇಖರಯ್ಯ, ಹಾರೋಹಳ್ಳಿ ಧನ್ಯಕುಮಾರ್, ಕ್ಯಾತನಹಳ್ಳಿ ಗುರು, ಅಮಿತ್, ಪ್ರಸನ್ನ ಇತರರು ಇದ್ದರು.