ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಬಳಿ, ಲೋಕಪಾವನಿ ನದಿ ದಡದಲ್ಲಿರುವ ಬಹುಭಾಷಾ ನಟ ಹಾಗೂ ನಿರ್ದೇಶಕ ಪ್ರಕಾಶ್ ರೈ ಅವರ ತೋಟದ ಮನೆಯಲ್ಲಿ ಸೋಮವಾರ ಮಧ್ಯಾಹ್ನ ನಾಗರಹಾವು ಕಾಣಿಸಿಕೊಂಡಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಬಳಿ, ಲೋಕಪಾವನಿ ನದಿ ದಡದಲ್ಲಿರುವ ನಟ ಪ್ರಕಾಶ್ ರೈ ಅವರ ತೋಟದ ಮನೆ ‘ನಿರ್ದಿಂಗತ’ದಲ್ಲಿ ಸೋಮವಾರ ಕಾಣಿಸಿಕೊಂಡ ನಾಗರಹಾವು
ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ತೋಟದ ಮನೆಯಲ್ಲಿ ಇದ್ದವರ ಕಣ್ಣಿಗೆ ಈ ಹಾವು ಗೋಚರಿಸಿದೆ. ತೋಟದ ಉಸ್ತುವಾರಿ ಆದರ್ಶ ಎಂಬವರು ಕೆ.ಶೆಟ್ಟಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ. ಸ್ವಾಮಿ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸ್ವಾಮಿ ಮನೆಯ ಸೂರಿನಲ್ಲಿದ್ದ, ಸುಮಾರು ನಾಲ್ಕು ಅಡಿ ಉದ್ದದ ನಾಗರಹಾವನ್ನು ರಕ್ಷಿಸಿ ಸಮೀಪದ ಕರಿಘಟ್ಟ ಅರಣ್ಯಕ್ಕೆ ಬಿಟ್ಟರು.
ಪ್ರಕಾಶ್ ರೈ ಅವರ 7 ಎಕರೆ ವಿಸ್ತೀರ್ಣದ ತೋಟದ ನಡುವೆ ‘ನಿರ್ದಿಗಂತ’ ಮನೆ ಇದ್ದು, ಅಲ್ಲಿ ಒಂದು ತಿಂಗಳಿನಿಂದ ‘ಗಾಯ’ ಹೆಸರಿನ ನಾಟಕದ ರಂಗ ತಾಲೀಮು ನಡೆಯುತ್ತಿದೆ. ರಂಗ ನಿರ್ದೇಶಕ ಶ್ರೀಪಾದ ಭಟ್ ಮತ್ತು 15ಮಂದಿ ರಂಗ ಕಲಾವಿದರು ಇಲ್ಲಿದ್ದಾರೆ. ರಂಗ ತಾಲೀಮು ನಡೆಯುತ್ತಿದ್ದಾಗಲೇ ಹತ್ತಿರದಲ್ಲಿ ಹಾವು ಕಾಣಿಸಿಕೊಂಡಿದೆ. ಹಾವನ್ನು ಹಿಡಿದ ಬಳಿಕ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.