ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬೋರೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬೆಳಗಿನೊಳಗು ಬಳಗ ಮತ್ತು ಮೈಸೂರಿನ ಸಂಚಲನ ಸಂಸ್ಥೆ ಆಯೋಜಿಸಿರುವ ‘ಕುಣಿಯೋಣು ಬಾರಾ’ ಮಕ್ಕಳ ಬೇಸಿಗೆ ಶಿಬಿರದ ನಿಮಿತ್ತ ಶಿಬಿರಾರ್ಥಿಗಳು ಶನಿವಾರ 50ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು.
ಶಾಲೆಯ ಆವರಣದಲ್ಲಿ ಹಲಸು, ಹೊಂಗೆ, ಬೇವು, ಸಂಪಿಗೆ, ಅರಳಿ, ರಕ್ತ ಚಂದನ, ಮಹಾಗನಿ ಇತರ ಗಿಡಗಳನ್ನು ನೆಟ್ಟು ನೀರೆರೆದರು. ತಾ.ಪಂ. ಮಾಜಿ ಸದಸ್ಯ ಎಸ್.ಕಾಳೇಗೌಡ, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಬಸವರಾಜು ಕೂಡ ಗಿಡ ನೆಡುವ ಕಾರ್ಯಕ್ಕೆ ಕೈ ಜೋಡಿಸಿದರು.
‘ಗಿಡಗಳನ್ನು ನೆಟ್ಟು ಬೆಳೆಸಿದರೆ ನೆರಳು, ಹೂ, ಹಣ್ಣು, ರಾಸುಗಳಿಗೆ ಮೇವು, ಕಟ್ಟಿಗೆ ಮತ್ತು ಆಮ್ಲಜನಕ ಸಿಗುತ್ತದೆ. ಹಾಗಾಗಿ ಸ್ಥಳಾವಕಾಶ ಇರುವ ಕಡೆ ಗಿಡಗಳನ್ನು ನೆಟ್ಟು ಬೆಳೆಸಬೇಕು’ ಎಂದು ಎಸ್. ಕಾಳೇಗೌಡ ಸಲಹೆ ನೀಡಿದರು.
ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಸುಪ್ತವಾಗಿರುವ ಸೃಜನಶೀಲ ಕಲೆಗಳನ್ನು ಬೆಳಕಿಗೆ ತರಲು ಸಹಕಾರಿಯಾಗಿವೆ ಎಂದು ಅವರು ಹೇಳಿದರು.
ಗ್ರಾ.ಪಂ. ಉಪಾಧ್ಯಕ್ಷೆ ನಿಂಗಮ್ಮ ಮಹದೇವು, ಸದಸ್ಯ ಎಂ.ಈ. ಜಗದೀಶ್, ಶಿಬಿರದ ನಿರ್ದೇಶಕ ದೀಪಕ್ ಮೈಸೂರು, ಸಂಚಾಲಕ ವಿ. ಅನಿಲ್ಕುಮಾರ್ ಪಾಲ್ಗೊಂಡಿದ್ದರು.