ವರುಣಾ: ಹೋಬಳಿಯ ಜಂತಗಳ್ಳಿಯಲ್ಲಿ ಶನಿವಾರ ಬೆಳಗಿನ ಜಾವ ಚಿರತೆಯೊಂದು ಬೋನಿಗೆ ಬಿದ್ದಿದೆ.
ನಾಲ್ಕು ವರ್ಷದ ಹೆಣ್ಣು ಚಿರತೆಯು ಜವರಯ್ಯಗೆ ಸೇರಿದ ಜೆ.ಕೆ ಫಾರಂನಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದಿದೆ ಎಂದು ಅರಣ್ಯ ಅಧಿಕಾರಿ ಮಾಲೇಗೌಡ ಮಾಹಿತಿ ನೀಡಿದರು. ಇತ್ತೀಚೆಗೆ ಕೂಡನಹಳ್ಳಿ ಬಳಿ ಚಿರತೆ ಮರಿಗಳನ್ನು ತಾಯಿ ಮಡಿಲಿಗೆ ಸೇರಿಸಲಾಗಿತ್ತು.
ಮಾಕನಹಳ್ಳಿ ಬಳಿ ಕೂಡ ಕೆಲ ದಿನಗಳ ಹಿಂದೆ ದಾಳಿ ಮಾಡಿದ ಚಿರತೆ ಮೇಕೆಯನ್ನು ಗಾಯಗೊಳಿಸಿತ್ತು. ಈ ಭಾಗದಲ್ಲಿ ಚಿರತೆ ಹಲವು ದಿನಗಳಿಂದ ಓಡಾಡುತ್ತಿರುವುದನ್ನು ಗ್ರಾಮಸ್ಥರು ಅರಣ್ಯ ಇಲಾಖೆಯ ಗಮನಕ್ಕೆ ತಿಳಿಸಿದ್ದರಿಂದ ಬೋನು ಇರಿಸಿದ್ದರು.
ಬೋನಿಗೆ ಬಿದ್ದ ಚಿರತೆಯನ್ನು ಕಾಡಿಗೆ ಬಿಡಲು ಅರಣ್ಯ ಇಲಾಖೆಯ ಸಿಬ್ಬಂದಿ ಶನಿವಾರ ತೆಗೆದುಕೊಂಡು ಹೋದರು.