ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವವು ಗುರುವಾರ ಸರಳವಾಗಿ ನೆರವೇರಿತು. ದೊಡ್ಡರಥದ ಬದಲಿಗೆ ಚಿಕ್ಕರಥದಲ್ಲಿ ಉತ್ಸವಮೂರ್ತಿಯನ್ನು ಇರಿಸಿದ ಮೆರವಣಿಗೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಪ್ರತಿಬಾರಿಯೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ರಥೋತ್ಸವಕ್ಕೆ ಈ ಬಾರಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು. ಚಾಮುಂಡಿಬೆಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರಷ್ಟೇ ರಥೋತ್ಸವದಲ್ಲಿ ಇದ್ದರು. ಹಲವು ಮಂದಿ ಗುಂಪುಗುಂಪಾಗಿದ್ದ ದೃಶ್ಯಗಳು ಕಂಡು ಬಂದವು.
‘ಸಂಪ್ರದಾಯದಂತೆ ಯಾವುದೇ ಲೋಪದೋಷಗಳಿಲ್ಲದೇ ಕಾರ್ಯಕ್ರಮ ಮಾಡಿದ್ದೇವೆ. ಈ ಬಾರಿ ತೆಪ್ಪೋತ್ಸವ ಇರುವುದಿಲ್ಲ’ ಎಂದು ದೇಗುಲದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ತಿಳಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ‘ಕೊರೊನಾ ಕಾಲದ ಅಗತ್ಯಕ್ಕೆ ತಕ್ಕಂತೆ ಸರಳವಾಗಿ, ಸಾಂಪ್ರದಾಯಿಕವಾಗಿ ರಥೋತ್ಸವ ನಡೆದಿದೆ’ ಎಂದು ಹೇಳಿದರು.