ಮೈಸೂರು: ‘ಡಿ.ಕೆ.ಶಿವಕುಮಾರ್ ಸುಮ್ಮನಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಅವರೆಷ್ಟು ಕಮಿಷನ್ ಪಡೆದಿದ್ದರು ಎಂಬುದನ್ನು ಬಹಿರಂಗಪಡಿಸಬೇಕಾಗುತ್ತದೆ’ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ಇಲ್ಲಿ ಎಚ್ಚರಿಕೆ ನೀಡಿದರು.
‘ಇದು ಕಮಿಷನ್ ಸರ್ಕಾರ’ ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನಾನು ಕೂಡ ಐದು ವರ್ಷ ಕಾಂಗ್ರೆಸ್ ಸರ್ಕಾರಲ್ಲಿ ಇದ್ದವನು. ಎಲ್ಲಾ ವಿಚಾರ ಗೊತ್ತು. ಹೀಗಾಗಿ, ಕಮಿಷನ್ ಆರೋಪ ಶೋಭೆ ತರುವಂಥದಲ್’ ಎಂದರು.
‘ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಕೋವಿಡ್ ಲಾಕ್ಡೌನ್ ಕಾರಣ ಏಳೆಂಟು ತಿಂಗಳು ಅಭಿವೃದ್ಧಿ ಕಾರ್ಯ ನಡೆದಿರಲಿಲ್ಲ. ಈಗ ಮತ್ತೆ ಅಭಿವೃದ್ಧಿ ಕಾರ್ಯಗಳು ವೇಗ ಪಡೆದುಕೊಂಡಿವೆ. ಇಷ್ಟು ದಿನ ಮಲಗಿದ್ದ ಕಾಂಗ್ರೆಸ್ ನವರು ಈಗ ಎದ್ದಿದ್ದಾರೆ’ ಎಂದರು.
ಖರೀದಿಯಾದವರು ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿ, ‘ನಮ್ಮನ್ನು ಖರೀದಿಸಲು ಯಾರಿಗೂ ಸಾಧ್ಯವಿಲ್ಲ. ಚೆಲುವರಾಯಸ್ವಾಮಿ ಹಾಗೂ ಇತರರು ಕಾಂಗ್ರೆಸ್ ಸೇರಿದಾಗ ಅವರನ್ನು ಮುಂಬೈನಲ್ಲಿ ಇರಿಸುವ ಜವಾಬ್ದಾರಿ ಹೊತ್ತಿದ್ದೇ ನಾನು. ಆಗ ಏನೆಲ್ಲ ನಡೆಯಿತು ಎಂದು ಹೇಳಲೇ’ ಎಂದು ತಿರುಗೇಟು ನೀಡಿದರು.