ಪಿರಿಯಾಪಟ್ಟಣ: ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು ಬುಧವಾರ ರಾತ್ರಿ ಕಾಳೆ ತಿಮ್ಮನಹಳ್ಳಿ ಗ್ರಾಮದ ಕೆ.ಎನ್.ರವಿಕುಮಾರ್ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಕಾಫಿ, ತೆಂಗು ಇನ್ನಿತರ ಬೆಳೆಗಳನ್ನು ನಾಶ ಮಾಡಿವೆ.
ತಾಲ್ಲೂಕಿನ ವರ್ತಿ ಹಾಡಿಯ ಅರಣ್ಯ ಪ್ರದೇಶದ ಬಳಿ ಇರುವ ಆನೆ ಕಂದಕವನ್ನು ದಾಟಿ ತೋಟಕ್ಕೆ ನುಗ್ಗಿರುವ ಕಾಡಾನೆಗಳು ತೆಂಗು, ಅಡಿಕೆ, ಮರಗೆಣಸು ಮತ್ತು ಕಾಫಿ ಗಿಡಗಳನ್ನು ಮುರಿದು, ತುಳಿದು ಹಾಕಿವೆ. ಕೃಷಿ ಪಂಪ್ಸೆಟ್ಗಳಿಗೆ ಅಳವಡಿಸಿರುವ ವಿದ್ಯುತ್ ಕೇಬಲ್ಗಳನ್ನು ತುಳಿದು ಹಾಕಿವೆ. ಗೊನೆ ಬಿಟ್ಟ ಬಾಳೆ ಗಿಡಗಳನ್ನು ಆನೆಗಳು ತುಳಿದು ತಿಂದು ಹಾಕುತ್ತಿದ್ದು ಇದರಿಂದ ಕನಿಷ್ಠ ₹ 12 ರಿಂದ ₹ 15 ಲಕ್ಷ ನಷ್ಟವಾಗಿದೆ ಎಂದು ಜಮೀನಿನ ಮಾಲೀಕ ರವಿಕುಮಾರ್ ಹೇಳಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಎಸ್. ಹನುಮಂತರಾಜು, ‘ರೈಲ್ವೆ ಹಳಿಗಳ ತಡೆಗೋಡೆ ನಿರ್ಮಿಸುವುದು ಇದಕ್ಕೆ ಶಾಶ್ವತ ಪರಿಹಾರವಾಗಿದ್ದು, ಈ ಯೋಜನೆಗೆ ಹೆಚ್ಚಿನ ಅನುದಾನದ ಅಗತ್ಯವಿದ್ದು, ಈಗ ಲಭ್ಯವಿರುವ ಅನುದಾನದಲ್ಲಿ ಅಗತ್ಯ ದುರಸ್ತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಡಿಆರ್ಎಫ್ಒ ಪ್ರಸನ್ನಕುಮಾರ್, ಜಿ.ಪಂ. ಸದಸ್ಯ ಕೆ.ಸಿ.ಜಯಕುಮಾರ್, ಮುತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸುನಂದ್, ಗ್ರಾಮಸ್ಥರಾದ ಬಾಲಕೃಷ್ಣ , ಕುಮಾರ್, ಅಣ್ಣಯ್ಯ ಇದ್ದರು.