ಮೈಸೂರು: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೆಸರಿನ ಟ್ವಿಟರ್ ಖಾತೆಯಲ್ಲಿ ‘ರೈತರ ಹೋರಾಟವನ್ನು ಬೆಂಬಲಿಸಿ’ ಟ್ವೀಟ್ ಮಾಡಲಾಗಿದೆ. ಇದು ಯದುವೀರ ಹೆಸರಿನಲ್ಲಿ ಯಾರೋ ತೆರೆದಿರುವ ನಕಲಿ ಖಾತೆ ಎಂಬುದು ಗೊತ್ತಾಗಿದೆ.
Yadhuveer K.C. Wodiyar @YaduveerWodiyar ಎಂಬ ಖಾತೆಯಲ್ಲಿ ‘ರೈತರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ. ಪ್ರಧಾನಿಯವರೇ, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ದಯವಿಟ್ಟು ಬಗೆಹರಿಸಿ’ ಎಂದು ಫೆ.4 ರಂದು ಪೋಸ್ಟ್ ಮಾಡಲಾಗಿದೆ.
ಯದುವೀರ ಹೆಸರಿನಲ್ಲಿ 2015ರ ಮಾರ್ಚ್ ತಿಂಗಳಲ್ಲಿ ಈ ಖಾತೆ ತೆರೆಯಲಾಗಿದ್ದು, 4,985 ಫಾಲೋವರ್ಗಳು ಇದ್ದಾರೆ.
ಇದು ಮೊದಲಲ್ಲ: ಯದುವೀರ ಹೆಸರಿನ ಇದೇ ಖಾತೆಯಲ್ಲಿ ಈ ಹಿಂದೆಯೂ ಟ್ವೀಟ್ಗಳನ್ನು ಮಾಡಲಾಗಿತ್ತು. ‘ನಾನು ರಾಜಕೀಯಕ್ಕೆ ಸೇರಬೇಕೇ?’ ಎಂದು ಪೋಸ್ಟ್ ಮಾಡಲಾಗಿತ್ತು. ಜತೆಗೆ ‘ಎಸ್’ ಹಾಗೂ’ ನೋ’ ಎಂಬ ಆಯ್ಕೆ ನೀಡಲಾಗಿತ್ತು. ಯದುವೀರ ಅವರೇ ರಾಜಕೀಯ ಸೇರ್ಪಡೆ ಸಂಬಂಧ ಸಲಹೆ ಕೇಳಿರಬಹುದೆಂದು ಸಾವಿರಾರು ಮಂದಿ ಈ ಟ್ವೀಟ್ಗೆ ಪ್ರತಿಕ್ರಿಯಿಸಿದ್ದರು.
ಆ ಸಂದರ್ಭದಲ್ಲಿ ‘ಇದು ನನ್ನ ಟ್ವೆಟರ್ ಖಾತೆ ಅಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದರು. ‘ನನಗೆ ಟ್ವಿಟರ್ನಲ್ಲಿ ಖಾತೆ ಇಲ್ಲ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಮಾತ್ರ ಖಾತೆಗಳು ಇವೆ’ ಎಂದು ಹೇಳಿದ್ದರು.
‘ಟ್ವಿಟರ್ನಲ್ಲಿರುವುದು ನನ್ನ ಹೆಸರಿನಲ್ಲಿರುವ ನಕಲಿ ಅಕೌಂಟ್. ದಯವಿಟ್ಟು ಫಾಲೋ ಮಾಡಬೇಡಿ’ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು.