ಮೈಸೂರು: ಇಲ್ಲಿನ ನಟನ ರಂಗಶಾಲೆ ಯಲ್ಲಿ ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿದ್ವಾನ್ ಗ.ನಾ.ಭಟ್ಟ ಅವರ ‘ಪ್ರಬೋಧ’, ‘ರಂಗಸ್ಪಂದ’ ಹಾಗೂ ‘ನೆಲದ ತಾರೆಗಳು’ ಪುಸ್ತಕಗಳನ್ನು ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾದ ಧರಣೀದೇವಿ ಮಾಲಗತ್ತಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಧರಣೀ ದೇವಿ ಮಾಲಗತ್ತಿ, ‘ಈ ಮೂರು ಪುಸ್ತಕಗಳಲ್ಲಿ ಅಮೂಲ್ಯವಾದ ಜ್ಞಾನವೇ ಇದೆ. ಇದುವರೆಗೂ ಗ.ನಾ.ಭಟ್ಟ ಅವರು 18 ಪುಸ್ತಕಗಳನ್ನು ಬರೆದಿದ್ದಾರೆ. ಎಲ್ಲವೂ ಸುಲಭವಾಗಿ ಓದಿಸಿಕೊಂಡು ಹೋಗುವಂತಹ ಪುಸ್ತಕಗಳಾಗಿವೆ’ ಎಂದು ಶ್ಲಾಘಿಸಿದರು.
ಇವರು ಸಾಕಷ್ಟು ವಿಷಯಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಇನ್ನು ಮುಂದಾದರು ಇಂತಹ ಸಾಹಿತಿಗಳನ್ನು ಗುರುತಿಸುವ ಕೆಲಸ ಆಗಬೇಕು ಎಂದು ಅವರು ತಿಳಿಸಿದರು.
ಹಳೆಯ ಕಾಲದ ಕಟ್ಟುಪಾಡುಗಳನ್ನು ಉಳಿಸಿಕೊಂಡು ಹೋಗಲೇಬೇಕು ಎಂಬ ನಿಯಮವನ್ನು ಹೇರಿಕೊಳ್ಳ ಬಾರದು. ಯಾವುದು ಸಮಾಜಪರವಾಗಿ ರುತ್ತದೋ, ಜೀವಪರವಾಗಿರುತ್ತದೋ ಅಂಥವುಗಳನ್ನು ಮಾತ್ರ ಉಳಿಸಿಕೊಂಡು ಹೋಗಬೇಕು. ಇಂದಿನ ಕಾಲಕ್ಕೆ ಅಗತ್ಯವಲ್ಲ ಕಟ್ಟುಪಾಡುಗಳನ್ನು ಬಿಡಬಹುದು ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಬ್ಬಿನಾಲೆ ವಸಂತ ಭಾರದ್ವಾಜ್ ಮಾತನಾಡಿ, ‘ಸಂಸ್ಕೃತಿಯ ಬೆಳವಣಿಗೆಯನ್ನು ದಾಖಲಿಸುವುದು ಸಾಹಿತ್ಯದ ಕೆಲಸ. ಗ.ನಾ.ಭಟ್ಟ ಅವರು ಬರೆದಿರುವ ಪುಸ್ತಕದಲ್ಲಿ ನಟನ ರಂಗಶಾಲೆ ನಡೆದು ಬಂದ ಹಾದಿಯ ಕುರಿತು ಲೇಖನ ಇದೆ. ಇದರ ಮೂಲಕ ಈ ರಂಗಮಂದಿರದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು. ನಂತರ, ಅವರು ಪುಸ್ತಕಗಳನ್ನು ಕುರಿತು ಮಾತನಾಡಿದರು.
ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಸಂವಹನ ಸಲಹೆಗಾರ ಎನ್.ರವಿಶಂಕರ್, ನಟನ ರಂಗಶಾಲೆಯ ಸಂಸ್ಥಾಪಕ ಮಂಡ್ಯ ರಮೇಶ್, ಲೇಖಕ ವಿದ್ವಾನ್ ಗ.ನಾ.ಭಟ್ಟ, ವಿದ್ವಾಂಸರಾದ ಎನ್.ಪ್ರಭಾಕರ್ ಇದ್ದರು.