ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತು ಆದೇಶ ವಾಪಸ್: ‘ಕೆಲಸ ಮಾಡೋದು ಹೇಗೆ’ ಎಂದು ಪ್ರಶ್ನಿಸಿದ್ದ ಮೈಸೂರು ಪೊಲೀಸರು

ಅರ್ಧನಿಮಿಷ ಸಚಿವ ಸಾ.ರಾ.ಮಹೇಶ್‌ ಕಾರು ತಡೆದಿದ್ದ ಕಾನ್‌ಸ್ಟೆಬಲ್ ವೆಂಕಟೇಶ್
Last Updated 29 ಮಾರ್ಚ್ 2019, 3:55 IST
ಅಕ್ಷರ ಗಾತ್ರ

ಮೈಸೂರು: ಹೆಡ್‌ಕಾನ್‌ಸ್ಟೆಬಲ್ ವೆಂಕಟೇಶ್ ಅವರ ಅಮಾನತು ಆದೇಶವನ್ನು ಒಂದೇ ದಿನಕ್ಕೆ ವಾಪಸ್ ಪಡೆಯಲಾಗಿದೆ. ಸಚಿವ ಸಾ.ರಾ.ಮಹೇಶ್ ಅವರ ಕಾರನ್ನು ತಡೆದಿದ್ದಕ್ಕೆ ವೆಂಕಟೇಶ್ ಅವರ‌ನ್ನು ಮಂಗಳವಾರವಷ್ಟೇ ಅಮಾನತುಪಡಿಸಲಾಗಿತ್ತು.

ಘಟನೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಕೀಲ ಪಡುವಾರಹಳ್ಳಿ ರಾಮಕೃಷ್ಣ ಏಕಾಂಗಿ ಪ್ರತಿಭಟನೆ ನಡೆಸಿದ್ದರು. ಹಿರಿಯ ಅಧಿಕಾರಿಗಳು ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲರೂ ಒಕ್ಕೊರಲಿನಿಂದ ಅಮಾನತು ಆದೇಶವನ್ನು ಖಂಡಿಸಿದ್ದರು.‌

ಇನ್ನು ಮುಂದೆ ಯಾರೇ ಬಂದರೂ ಅವರನ್ನು ತಡೆಯುವುದಿಲ್ಲ ಎಂಬ ಮನಃಸ್ಥಿತಿಗೆ ಬಂದಿರುವುದಾಗಿ ಹಲವು ಪೊಲೀಸರು ತಮ್ಮ ತಮ್ಮ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಇದನ್ನೆಲ್ಲ ಗಮನಿಸಿದ ಪೊಲೀಸ್ ಇಲಾಖೆ ಬುಧವಾರ ಸಂಜೆ ಹೊತ್ತಿಗೆ ಅಮಾನತು ಆದೇಶವನ್ನು ವಾಪಸ್ ಪಡೆದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಪಿ ಮುತ್ತುರಾಜ್, ‘ವೆಂಕಟೇಶ್ ಅವರು ಮನವಿ ಪತ್ರ ನೀಡಿ ಘಟನೆ ನಡೆದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ಜತೆಗೆ, ಅಮಾನತು ಆದೇಶ ವಾಪಸ್ ಪಡೆಯಲು ಕೋರಿದ್ದರು. ಇವರ ಮನವಿಯನ್ನು ಪರಿಗಣಿಸಿ ಅಮಾನತು ಆದೇಶವನ್ನು ವಾಪಸ್ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

ಅರ್ಧನಿಮಿಷ ಕಾರು ತಡೆದದ್ದಕ್ಕೆ ಅಮಾನತು ಶಿಕ್ಷೆ

ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್‌ ನಾಮಪತ್ರ ಸಲ್ಲಿಸುವ ವೇಳೆ ಸಚಿವ ಸಾ.ರಾ.ಮಹೇಶ್ ಅವರ ಕಾರನ್ನು ಅರ್ಧ ನಿಮಿಷ ತಡೆದ ಕುವೆಂಪು ನಗರ ಠಾಣೆ ಹೆಡ್‌ಕಾನ್‌ಸ್ಟೆಬಲ್ ವೆಂಕಟೇಶ್ ಅವರನ್ನು ಮಂಗಳವಾರ ಅಮಾನತುಗೊಳಿಸಲಾಗಿತ್ತು.

ನಗರದ ಜೆಎಲ್‌ಬಿ ರಸ್ತೆಗೆ ಹೊಂದಿಕೊಂಡಂತಿರುವ ಜಿಲ್ಲಾಧಿಕಾರಿ ಕಚೇರಿ ಪ್ರವೇಶದ್ವಾರದ ಬಳಿ ಬ್ಯಾರಿಕೇಡ್‌ ಹಾಕಲಾಗಿತ್ತು. ಸಾ.ರಾ.ಮಹೇಶ್ ಕಾರು ತಡೆದ ಕಾನ್‌ಸ್ಟೆಬಲ್ ಕಿಟಕಿ ಗಾಜು ಇಳಿಸಿ ಸಚಿವರ ಮುಖ ನೋಡಿ, ಒಳಗೆಷ್ಟು ಮಂದಿ ಇದ್ದಾರೆ ಎಂದು ಖಚಿತಪಡಿಸಿಕೊಂಡ ಬಳಿಕ ಕಾನ್ಸ್‌ಟೆಬಲ್ ಕಾರನ್ನು ಒಳಗೆಬಿಟ್ಟಿದ್ದರು.ಇದಕ್ಕೆ ಸುಮಾರು ಅರ್ಧ ನಿಮಿಷ ಹಿಡಿದಿದೆ.

ಇದರಿಂದ ಕೋಪಗೊಂಡ ಸಾ.ರಾ.ಮಹೇಶ್, ಕಾರಣ ಇಲ್ಲದೆ ತಡೆದಿದ್ದು ಸರಿ ಇಲ್ಲ ಎಂದು ಸ್ಥಳದಲ್ಲೇ ಪೊಲೀಸರ ಮೇಲೆ ಹರಿಹಾಯ್ದಿದ್ದಾರೆ. ಬಳಿಕ ಕಾನ್‌ಸ್ಟೆಬಲ್ ಮೇಲೆ ಕ್ರಮ ಕೈಗೊಳ್ಳಲು ಮೌಖಿಕ ಸೂಚನೆ ನೀಡಿದರು ಎನ್ನಲಾಗಿದೆ.ದೇವರಾಜ ವಿಭಾಗದ ಎಸಿಪಿ ಗಜೇಂದ್ರಪ್ರಸಾದ್ ಅವರಿಂದ ವರದಿ ಪಡೆದು ಡಿಸಿಪಿ ಮುತ್ತುರಾಜ್ ಅಮಾತುಮಾಡಿ ಆದೇಶಿಸಿದ್ದರು.

‘ಒಬ್ಬ ಅಭ್ಯರ್ಥಿ ಜತೆ ಮೂರು ವಾಹನಗಳು ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಿಸುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೂ, ಕಾನ್‌ಸ್ಟೆಬಲ್‌ ತಡೆದಿರುವುದು ತಪ್ಪು. ಹೀಗಾಗಿ, ಅಮಾನತು ಮಾಡಲಾಗಿದೆ’ ಎಂದು ಡಿಸಿಪಿ ಮುತ್ತುರಾಜ್ ಪ್ರತಿಕ್ರಿಯಿಸಿದ್ದರು.

ಇಲಾಖೆಯಲ್ಲಿ ವ್ಯಾಪಕ ಆಕ್ರೋಶ: ಪ್ರತಿಭಟನೆ

‘ಅರ್ಧ ನಿಮಿಷ ಕಾರನ್ನು ತಡೆದು ಕಾರಿನೊಳಗೆ ಏನಿದೆ, ಯಾರಿದ್ದಾರೆ ಎಂದು ನೋಡಬಾರದು ಎಂದರೆ ಹೇಗೆ?’ ಎಂದು ಪ್ರಶ್ನಿಸಿದ್ದ ಪೊಲೀಸ್‌ ಕಾನ್‌ಸ್ಟೆಬಲ್ ಮತ್ತು ಇನ್‌ಸ್ಪೆಕ್ಟರ್‌ಗಳುಸಚಿವರ ವರ್ತನೆಯು ‘ನಮ್ಮ ನೈತಿಕ ಸ್ಥೈರ್ಯವನ್ನೇ ಉಡುಗಿಸಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಸಚಿವರ ವರ್ತನೆಯನ್ನು ಹಲವು ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದರು.ವಕೀಲಪಡುವಾರಹಳ್ಳಿ ರಾಮಕೃಷ್ಣ ಬುಧವಾರ ಜಿಲ್ಲಾ ನ್ಯಾಯಾಲಯದ ಮಹಾತ್ಮ ಗಾಂಧಿ ಪುತ್ಥಳಿ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದರು.

ತೀರಾ ಬೇಸರಕ್ಕೆ ಒಳಗಾಗಿರುವ ಕಾನ್‌ಸ್ಟೆಬಲ್ ವೆಂಕಟೇಶ್ ತಮ್ಮ ಮೊಬೈಲ್‌ನ್ನು ಸ್ವಿಚ್‌ ಆಫ್ ಮಾಡಿಕೊಂಡಿದ್ದಾರೆ. ಸಂಪರ್ಕಿಸಿ ಸಮಾಧಾನ ಹೇಳಲು ಯತ್ನಿಸಿದ ಸಹೋದ್ಯೋಗಿಗಳಿಗೆತೀವ್ರ ನಿರಾಸೆಯಾಗಿತ್ತು. ‘ವೆಂಕಟೇಶ್ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದ್ದ ರು’ ಎಂದು ಸಹೋದ್ಯೋಗಿ ಕಾನ್‌ಸ್ಟೆಬಲ್ ‘ಪ್ರಜಾವಾಣಿ’ಗೆ ತಿಳಿಸಿದ್ದರು.

ಇದೇ ಮೊದಲೇನಲ್ಲ

ಸಚಿವ ಸಾ.ರಾ.ಮಹೇಶ್ ಅವರಿಗೂ ಪೊಲೀಸರಿಗೂ ಜಟಾಪಟಿ ಇದೇ ಮೊದಲೇನಲ್ಲ. ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಕ್ರಿಯಾಸಮಾಧಿ ವೀಕ್ಷಿಸಲು ಬಂದಾಗ ತಮ್ಮನ್ನು ತಡೆದ ಈ ಹಿಂದಿನ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್ ಅವರನ್ನು ಬಹಿರಂಗವಾಗಿಯೇ ನಿಂದಿಸಿದ್ದರು. ಇದರಿಂದ ನೊಂದ ದಿವ್ಯಾ ಅವರು ಕಣ್ಣೀರು ಹಾಕಿದ್ದ ವಿಡಿಯೊ ವಿವಾದ ಸೃಷ್ಟಿಸಿತ್ತು.

ತಮ್ಮ ಕಾರ್ಯವೈಖರಿಸಿ ಸಮರ್ಥಿಸಿಕೊಂಡಿದ್ದ ಪೊಲೀಸ್ ಅಧಿಕಾರಿದಿವ್ಯಾ ಗೋಪಿನಾಥ್, ‘ಗದ್ದುಗೆಯ ಸ್ಥಳ ಚಿಕ್ಕದಾಗಿತ್ತು. ಒಳಗೆ ಯಾರು ಯಾರನ್ನು ಬಿಡಬೇಕು ಅಲ್ಲಿಗೆ ಯಾರು ಹೋಗಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಲಾಗಿತ್ತು. ನಮ್ಮ ಕರ್ತವ್ಯ ಏನಿರುತ್ತದೆಯೋ ಅದನ್ನು ನಾವು ಮಾಡುತ್ತೇವೆ.ಸಚಿವರನ್ನುತಡೆದಿದ್ದು ನಿಜ. ಅವರು ಸಚಿವರು ಎಂದು ತಿಳಿದ ಮೇಲೆ ಒಳಗೆ ಬಿಟ್ಟೆವು. ಅವರು ಅಷ್ಟರಲ್ಲಿ ಸ್ವಲ್ಪ ಜೋರಾಗಿ ಮಾತನಾಡಿದ್ದರು. ಲಕ್ಷಾಂತರ ಜನರು ಬರುವಾಗ ಕೆಲವರಿಗೆ ತೊಂದರೆಗಳು ಆಗುತ್ತವೆ. ಎಲ್ಲರ ಹಿತದೃಷ್ಟಿಯಿಂದ ಒಳ್ಳೆಯದು ಆಗಲಿ ಎಂದು ನಾವು ಚಿಂತಿಸುತ್ತೇವೆ’ ಎಂದು ಹೇಳಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT