ಮಂಗಳವಾರ, ಮಾರ್ಚ್ 21, 2023
28 °C
ಗಣಿಗಾರಿಕೆ: ಸಿಬಿಐ ತನಿಖೆಗೆ ಆಗ್ರಹ

ಕೆಆರ್‌ಎಸ್‌ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ: ಸುಮಲತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮಂಡ್ಯ ಜಿಲ್ಲೆಯಲ್ಲಿನ ಗಣಿಗಾರಿಕೆ ಪ್ರದೇಶಕ್ಕೆ ಗಣಿ ಸಚಿವ ಮುರುಗೇಶ ನಿರಾಣಿ ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ. ಸಚಿವರ ಪರಿಶೀಲನೆ ಸಂದರ್ಭದಲ್ಲೇ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ವಹಿಸುವಂತೆ ಆಗ್ರಹಿಸುವೆ’ ಎಂದು ಸಂಸದರಾದ ಸುಮಲತಾ ಬುಧವಾರ ಇಲ್ಲಿ ತಿಳಿಸಿದರು.

ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೆಆರ್‌ಎಸ್‌ ರಕ್ಷಣೆಗಾಗಿ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿರುವೆ. ನನ್ನ ಈ ಹೋರಾಟಕ್ಕೆ ಜಲಾಶಯದ ಬಗ್ಗೆ ಕಾಳಜಿ ಇರುವ ಎಲ್ಲರೂ ಕೈಜೋಡಿಸಬೇಕು. ವಿರೋಧ ಪಕ್ಷದವರ ಬೆಂಬಲ ಕೇಳುವ ಮೂಲಕ ಇದನ್ನು ರಾಜಕೀಯಗೊಳಿಸಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ’ ಎಂದು ಸ್ಪಷ್ಟಪಡಿಸಿದ ಸುಮಲತಾ, ‘ಸಂಸದರ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗೆ ಕೇಳಿದ ಪ್ರಶ್ನೆಯನ್ನೇ ರಾಜಕೀಯವಾಗಿ ತಿರುಚಲಾಗಿದೆ’ ಎಂದು ಕಿಡಿಕಾರಿದರು.

‘ಜಲಾಶಯದ ಸುತ್ತಮುತ್ತ ನಡೆದಿರುವ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಅಪಾಯವಿದೆ ಎಂದು ತಜ್ಞರು ವರದಿ ನೀಡಿದ್ದಾರೆ. 11 ಬಾರಿ ಜಲಾಶಯದ ಪರಿಸರದಲ್ಲಿ ಲಘುವಾಗಿ ಭೂಮಿ ಕಂಪಿಸಿರುವುದು ದಾಖಲಾಗಿದೆ. ಈ ಬಗ್ಗೆ ರೈತರು ನನ್ನ ಬಳಿ ವ್ಯಕ್ತಪಡಿಸಿದ್ದ ಆತಂಕ, ಕಲ್ಲು ಗಣಿಗಾರಿಕೆ ವಿರುದ್ಧ ಸ್ಥಳೀಯರು ನೀಡಿದ್ದ ದೂರನ್ನು ಆಧರಿಸಿ ದಿಶಾ ಸಭೆಯಲ್ಲಿ ಪ್ರಶ್ನಿಸಿದ್ದೆ’ ಎಂದು ಸಂಸದರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಾನು ಎಲ್ಲಿಯೂ ಬೇಜವಾಬ್ದಾರಿಯಿಂದ ಮಾತನಾಡಿಲ್ಲ. ದಿಶಾ ಸಭೆಯಲ್ಲೇ ಪ್ರಶ್ನಿಸಿದ್ದೆ. ರಾಜಕೀಯ ಮಾಡುವುದಾಗಿದ್ದರೆ ಸಾರ್ವಜನಿಕವಾಗಿ ಜನರು ಸೇರಿದ್ದ ಸಭೆಗಳಲ್ಲೇ ಈ ಬಗ್ಗೆ ಮಾತನಾಡುತ್ತಿದ್ದೆ. ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದೆ. ನನ್ನ ಪ್ರಶ್ನೆಯ ಆಶಯವನ್ನೇ ತಿರುಚಿ ರಾಜಕೀಯಗೊಳಿಸಿದ್ದಾರೆ’ ಎಂದು ಸುಮಲತಾ ಹರಿಹಾಯ್ದರು.

‘ಮಂಡ್ಯ, ಶ್ರೀರಂಗಪಟ್ಟಣದ ಕೆಲವೆಡೆ, ಕೆಲವರು ನನ್ನ ಕಾರಿಗೆ ಅಡ್ಡ ಹಾಕುವುದು ಸೇರಿದಂತೆ ಇನ್ನಿತರೆ ಚಟುವಟಿಕೆಗಳ ಮೂಲಕ ಅಡ್ಡಿಪಡಿಸುತ್ತಿದ್ದಾರೆ. ಈ ಕುರಿತಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸುವೆ’ ಎಂದು ಸಂಸದರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು