ಮದ್ದೂರು: ಪಟ್ಟಣದ ಸಮೀಪವಿರುವ ಹೊಟ್ಟೇಗೌಡನ ದೊಡ್ಡಿಯಲ್ಲಿ, ಅಭಿಮಾನಿಗಳು ನಟ ಅಂಬರೀಷ ಅವರ ನೆನಪಿಗಾಗಿ ಪುಟ್ಟದೊಂದು ‘ಅಂಬಿ ಗುಡಿ’ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ.
ನ.24ರಂದು ಅಂಬರೀಷ್ ಪತ್ನಿ, ಸಂಸದೆ ಸುಮಲತಾ ಉದ್ಘಾಟನೆ ನೆರವೇರಿಸಲಿದ್ದಾರೆ. ಅವರ ಪುತ್ರ ಅಭಿಷೇಕ್, ನಟರಾದ ದರ್ಶನ್, ದೊಡ್ಡಣ್ಣ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಭಾಗವಹಿಸಲಿದ್ದಾರೆ.
ಅಂಬರೀಷ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಸ್ವಂತ ಹಣದಿಂದ ₹2 ಲಕ್ಷ ವೆಚ್ಚದಲ್ಲಿ ಅಂಬರೀಷ ಅವರ ಕಂಚಿನ ಪುತ್ಥಳಿಯನ್ನು ಮಾಡಿಸಿದ್ದಾರೆ. ಅದನ್ನು ಗ್ರಾಮದ ವೃತ್ತದಲ್ಲಿ ಪ್ರತಿಷ್ಠಾಪಿಸಿ ಗುಡಿ ನಿರ್ಮಿಸಿದ್ದಾರೆ. ಪಕ್ಕದಲ್ಲಿಯೇ ಚಿಕ್ಕ ಉದ್ಯಾನವನ್ನೂ ನಿರ್ಮಿಸಲಾಗಿದ್ದು, ನಾಲ್ಕು ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗುಡಿ ನಿರ್ಮಾಣಕ್ಕೆ ಒಟ್ಟು ₹8 ಲಕ್ಷ ಖರ್ಚಾಗಿದೆ.
‘ಗ್ರಾಮದಲ್ಲಿ 20 ವರ್ಷಗಳ ಹಿಂದೆ ಅಂಬರೀಷ ಅಭಿಮಾನಿಗಳ ಸಂಘವನ್ನು ಸ್ಥಾಪಿಸಿದ್ದು, ಅವರ ಹೆಸರಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದೇವೆ. ಅಂಬರೀಷ ನಿಧನದ ನೋವನ್ನು ಮರೆಯಲಾಗಲಿಲ್ಲ. ಅವರ ನೆನಪಿಗಾಗಿ 40ಕ್ಕೂ ಹೆಚ್ಚು ಯುವಕರು ತಮ್ಮ ದುಡಿಮೆಯ ಒಂದಷ್ಟು ಪಾಲನ್ನು ದೇಣಿಗೆಯಾಗಿ ನೀಡಿದ್ದು, ಈ ಹಣದಲ್ಲಿ ‘ಅಂಬಿ ಗುಡಿ’ ನಿರ್ಮಿಸಲಾಗಿದೆ. ಅಂಬರೀಷ ಅವರ ಅಸ್ಥಿಯನ್ನು ಹಾಕಿ ಅದರ ಮೇಲೆ ಕಂಚಿನ ಪುತ್ಥಳಿಯನ್ನು ಇರಿಸಲಾಗಿದೆ. ಈ ಮೂಲಕ ನಮ್ಮ ಹೃದಯದಲ್ಲಿ ಅಂಬಿ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ’ ಎಂದು ಸಂಘದ ಅಧ್ಯಕ್ಷ ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.