ಮೈಸೂರು: ‘ರಾಜ್ಯದಲ್ಲಿನ ಆಡಳಿತದ ಬಗ್ಗೆ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡ ನನ್ನನ್ನು ಎರಡ್ಮೂರು ದಿನದಿಂದ ಖಳನಾಯಕನನ್ನಾಗಿ ಬಿಂಬಿಸಲಾಗುತ್ತಿದೆ. ಸ್ನೇಹಿತರ ಮಾತಿನಿಂದ ನೋವಾಗಿದೆ’ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಮಂಗಳವಾರ ರಾತ್ರಿ ಇಲ್ಲಿ ಪ್ರತಿಕ್ರಿಯಿಸಿದರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಪೊಲೀಸ್ ಬೆಂಗಾವಲು ಇಲ್ಲದೆ, ಖಾಸಗಿ ಕಾರಿನಲ್ಲಿ ದಿಢೀರ್ ಭೇಟಿ ನೀಡಿದ ಸಚಿವರು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜೊತೆ ಗೋಪ್ಯ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
‘ನನ್ನ ಮನಸ್ಸಿನ ನೋವನ್ನು ಸ್ವಾಮೀಜಿ ಬಳಿ ಹೇಳಿಕೊಂಡೆ. ಮನಸ್ಸು ಹಗುರವಾಯಿತು. ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಮಾತನಾಡಲ್ಲ’ ಎಂದು ಕೈ ಮುಗಿದರು.
‘ಪೊಲೀಸ್ ಬೆಂಗಾವಲು, ಸರ್ಕಾರಿ ಕಾರಿನಲ್ಲಿ ಬರಲಿಲ್ಲ ಅಂದ್ರೆ ನಾನು ಸಚಿವನಲ್ವಾ’ ಎಂದ ಯೋಗೇಶ್ವರ್, ‘ಸಿನಿಮಾದಲ್ಲೂ ನಾನೇ ನಾಯಕ. ರಾಜಕೀಯದಲ್ಲೂ ನಾನೇ ನಾಯಕ’ ಎಂದು ಹೇಳಿದರು. ಪತ್ರಕರ್ತರ ಯಾವೊಂದು ಪ್ರಶ್ನೆಗೆ ಉತ್ತರಿಸದೆ ಬೇಸರದಿಂದಲೇ ಮಠದಿಂದ ಹೊರಟು ಹೋದರು.