ಎಚ್.ಡಿ.ಕೋಟೆ: ತಾಲ್ಲೂಕಿನ ಮೊತ್ತ ಗ್ರಾಮದ ಬಳಿ ಹುಲಿಯ ಹೆಜ್ಜೆಯ ಗುರುತುಗಳು ಪತ್ತೆಯಾಗಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಅರಣ್ಯ ಅಧಿಕಾರಿಗಳಾದ ಅಂಥೋನಿ, ರವಿಕುಮಾರ್, ಸತೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹುಲಿಯ ಹೆಜ್ಜೆ ಗುರುತುಗಳು ಎಂದು ಖಚಿತ ಪಡಿಸಿಕೊಂಡಿದ್ದಾರೆ.’
ನಂತರ ಹೆಜ್ಜೆಯ ಗುರುತುಗಳನ್ನು ಹಿಂಬಾಲಿಸಿ ಹೋಗಿದ್ದಾರೆ. ಮೊದಲಿಗೆ ರೈತ ಸಣ್ಣಸ್ವಾಮಿ ಅವರ ಜಮೀನಿನಿಂದ ದೇವಯ್ಯ ಅವರ ಜಮೀನಿನ ಕಡೆಗೆ ಬಂದಿದ್ದು, ಮೈಸೂರು ಮಾನಾಂದವಾಡಿ ರಸ್ತೆಯನ್ನು ದಾಟಿ, ಲಕ್ಷ್ಮಿಪುರ ರಸ್ತೆಯ ತಿರುವಿನಲ್ಲಿರುವ ಬಾಳೆತೋಟದ ಕಡೆಗೆ ಹೋಗಿದೆ.
ಅಲ್ಲಿ ಬಾಳೆಯ ತಂತಿ ಬೇಲಿ ನೆಗೆಯುವ ವೇಲೆ ಹುಲಿಯ ಕೂದಲುಗಳು ತಂತಿಗೆ ಸಿಕ್ಕಿಕೊಂಡು ಅಲ್ಲಿಯೇ ಉದುರಿವೆ. ಅಲ್ಲಿಂದ ಆನಗಟ್ಟಿ ಎಲ್ಲೆಯಲ್ಲಿರುವ ಶೀರನಹುಂಡಿ ಬೆಳ್ಳಿಯವರ ಜಮೀನಿನ ಮೂಲಕ ದೇವಯ್ಯನ ಕೆರೆಯ ಹತ್ತಿರ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನಿಡಿದ್ದಾರೆ.
15 ದಿನಗಳ ಹಿಂದೆ ರವಿ ಎಂಬುವವರ ತೋಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು ರೈತರು ಆತಂಕಗೊಂಡಿದ್ದಾರೆ. ಜಮೀನಿನಲ್ಲಿ ಬಿತ್ತನೆ ಮತ್ತು ಬೇಸಾಯ ಮಾಡಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಹುಲಿಯನ್ನು ಹಿಡಿಯುವಂತೆ ಗ್ರಾಮದ ದೇವರಾಜು ಒತ್ತಾಯಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಪ್ರಾದೇಶಿಕ ವಲಯದ ಅಧಿಕಾರಿ ಮಧು ಹುಲಿ ಸೆರೆ ಹಿಡಿಯಲು ಈಗಾಗಲೇ ಬೋನನ್ನು ಇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ.