ಮೈಸೂರು: ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನ ನಡೆದ ಗೆಡ್ಡೆ–ಗೆಣಸು ಮೇಳಕ್ಕೆ ಭಾನುವಾರ ರಾತ್ರಿ ತೆರೆ ಬಿದ್ದಿತು.
ವಾರಾಂತ್ಯದ ದಿನಗಳಾಗಿದ್ದರಿಂದ ಅಪಾರ ಸಂಖ್ಯೆಯ ಮೈಸೂರಿಗರು ಮೇಳಕ್ಕೆ ಭೇಟಿ ನೀಡಿ, ಗೆಡ್ಡೆ–ಗೆಣಸಿನ ಖಾದ್ಯಗಳನ್ನು ಸವಿದರು. ತರಹೇವಾರಿ ಗೆಡ್ಡೆಗಳನ್ನು ಕಣ್ತುಂಬಿಕೊಂಡರು. ಸಾವಯವ ತರಕಾರಿ ಬೀಜಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದರು.
ಮೇಳದ ಅಂಗವಾಗಿ ಭಾನುವಾರ ‘ಅಡುಗೆ ಸ್ಪರ್ಧೆ’ ನಡೆಯಿತು. 12 ಸ್ಪರ್ಧಿಗಳು ಗೆಡ್ಡೆ–ಗೆಣಸಿನ ವಿವಿಧ ಖಾದ್ಯವನ್ನು ಸ್ಪರ್ಧೆಗಾಗಿಯೇ ತಯಾರಿಸಿಕೊಂಡು ತಂದಿದ್ದರು.
ಶತಾವರಿ ಬೇರಿನ ಔಷಧೀಯ ಜಾಮೂನು, ಸಿಹಿ ಗೆಣಸಿನ ಸಮೋಸ, ಕರ್ಜಿಕಾಯಿ, ಪೂರಿ, ಲಡ್ಡು–ಪಾಯಸ, ಮರಗೆಣಸಿನ ಪಲ್ಯ–ರೊಟ್ಟಿ, ಪರ್ಪಲ್ ಯಾಮ್ನ ಪಲ್ಯ–ಜ್ಯೂಸ್ ಮೊದಲಾದ ತಿನಿಸುಗಳನ್ನು ಸ್ಪರ್ಧಿಗಳು ಪ್ರದರ್ಶಿಸಿದರು.
ಶ್ರೀದೇವಿ ಪಿ.ಹೆಗಡೆ ಅವರಿಗೆ ಮೊದಲ ಬಹುಮಾನ, ಮಂಜುಳಾ ಪ್ರಕಾಶ್ಗೆ ಎರಡನೇ ಬಹುಮಾನ, ರತಿ ಸಂತೋಷಿ ಅವರಿಗೆ ಮೂರನೇ ಬಹುಮಾನ ಲಭಿಸಿತು.