ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಮ್ಮೆ ತನಿಖೆಗೆ ಮನೀಷ್ ಮೌದ್ಗಿಲ್‌ಗೆ ಅಧಿಕಾರ ಕೊಟ್ಟವರಾರು: ಎಸ್.ಟಿ.ಸೋಮಶೇಖರ್

Last Updated 5 ಸೆಪ್ಟೆಂಬರ್ 2021, 7:40 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಭೂ ಅಕ್ರಮಗಳ ಬಗ್ಗೆ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈ ತನಿಖೆಯನ್ನು ಮತ್ತೊಮ್ಮೆ ಮಾಡಿಸಲು ಮನೀಷ್ ಮೌದ್ಗಿಲ್‌ಗೆ ಅಧಿಕಾರ ಕೊಟ್ಡವರು ಯಾರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲೇ ಒಮ್ಮೆ ಆಗಿರುವ ತನಿಖೆಯನ್ನು ಇನ್ನೊಮ್ಮೆ ಮಾಡಿಸುವುದರಲ್ಲಿ ಏನು ಅರ್ಥವಿದೆ. ಕೆಲವು ಐ‌ಎಎಸ್ ಅಧಿಕಾರಿಗಳಲ್ಲಿ ತಾವು ಮಾತ್ರ ಪ್ರಾಮಾಣಿಕರು, ಬೇರೆಯವರೆಲ್ಲ ಅಪ್ರಾಮಾಣಿಕರು ಎನ್ನುವ ಮನಸ್ಥಿತಿ ಇದೆ. ಅವರ ಮನಸ್ಸಿಂದ ಇಂತಹ ಅಭಿಪ್ರಾಯ ತೆಗೆಯಬೇಕು ಎಂದರು.

ಏನಾದರೂ ತಪ್ಪಿದ್ದರೆ ತನಿಖೆ ಮಾಡಲಿ, ಶಿಕ್ಷೆಯಾಗಲಿ. ನಮ್ಮ ಅಭ್ಯಂತರ ಇಲ್ಲ. ಆದರೆ ಅದಕ್ಕೆ ಒಂದು ವ್ಯವಸ್ಥೆ ಇರುತ್ತದೆ, ರೀತಿ-ನೀತಿ ಇರುತ್ತದೆ. ಐ‌ಎಎಸ್ ಅಧಿಕಾರಿಗಳು ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಎರಡು ವರ್ಷದ ಹಿಂದೆ ಸರ್ಕಾರ ದೊಡ್ಡ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಿತು. ಅದರ ಭೂ ದಾಖಲೆಗಳನ್ನು ಸರಿಪಡಿಸುವ ಕೆಲಸವನ್ನು ಮನೀಷ್ ಮೌದ್ಗಿಲ್‌ಗೆ ವಹಿಸಲಾಗಿದೆ. ಎರಡು ವರ್ಷ ಕಳೆದರೂ ಇನ್ನೂ 53 ಸಾವಿರ ರೈತರ ಭೂ ದಾಖಲೆಗಳ ಪರಿಶೀಲನೆಯನ್ನು ಮನೀಷ್ ಮೌದ್ಗಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಆದರೆ ಈಗಾಗಲೇ ತನಿಖೆಯಾಗಿರುವ ಭೂಅಕ್ರಮ ಆರೋಪದ ಬಗ್ಗೆ ಮತ್ತೊಮ್ಮೆ ತನಿಖೆಗೆ ತರಾತುರಿಯಲ್ಲಿ ಮುಂದಾಗಿರುವ ಉದ್ದೇಶ ಏನು ಎಂದು ಅವರು ಪ್ರಶ್ನಿಸಿದರು.

ಮೈಸೂರು ತಾಲ್ಲೂಕು ಜಯಪುರ, ಕಸಬಾ ಹೋಬಳಿ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಬೆಳಗೊಳ ಗ್ರಾಮದ ಕೆಲವು ಸ್ಥಳಗಳನ್ನು ಮರುಸರ್ವೆ ಮಾಡಬೇಕು ಎಂದು ಭೂದಾಖಲೆಗಳ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ. ಪರಿಶೀಲನಾ ಕಾರ್ಯಕ್ಕೆ ಮೈಸೂರು ಜಿಲ್ಲೆಯ ಅಧಿಕಾರಿಗಳನ್ನು ಹೊರಗಿಟ್ಟು ತಂಡ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT