ಮೈಸೂರು: ಇಲ್ಲಿನ ಸರಸ್ವತಿಪುರಂ 4ನೇ ಮೇನ್ನಲ್ಲಿ ಸೋಮವಾರ ಬೆಳಿಗ್ಗೆ ನಾಗರತ್ನ (33) ಎಂಬುವವರ ಮೇಲೆ ಅವರ ಪತಿ ಬಂಗಾರುನಾಯಕ (44) ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ತಲೆಗೆ ಪೆಟ್ಟು ಬಿದ್ದ ನಾಗರತ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಪತಿಯ ಶೋಧ ಕಾರ್ಯ ನಡೆಸಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಚಾಮರಾಜನಗರದ ಬಂಗಾರುನಾಯಕನನ್ನು ನಾಗರತ್ನ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ, ಪತಿಯ ಜತೆ ವಿರಸದಿಂದ ನಾಗರತ್ನ ದೂರವಾಗಿದ್ದರು. ನಂತರ, ಪತಿಯ ಸಾಲವನ್ನೂ ಇವರು ತೀರಿಸಿದ್ದರು. ಮನೆಕೆಲಸ ಮಾಡಿಕೊಂಡು ತಮ್ಮ ಕೆ.ಜಿ.ಕೊಪ್ಪಲಿನ ತವರು ಮನೆಯಲ್ಲಿ ವಾಸವಿದ್ದರು.
ಮನೆಯ ಹತ್ತಿರ ಬಂದು ಜಗಳ ತೆಗೆದ ಬಂಗಾರು ನಾಯಕ ನಂತರ ಮನೆಕೆಲಸಕ್ಕೆ ಹೋಗುತ್ತಿದ್ದ ನಾಗರತ್ನ ಮೇಲೆ ಸರಸ್ವತಿಪುರಂನಲ್ಲಿ ಹಲ್ಲೆ ನಡೆಸಿದ ಎಂದು ಪೊಲೀಸರು ತಿಳಿಸಿದ್ದಾರೆ. ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.