ಮೈಸೂರು: ಸೆ. 1ರಿಂದ ದಸರಾ ಆನೆಗಳ ಗಜ ಪಯಣ ಆರಂಭ ಆಗಲಿದ್ದು, ಮೊದಲ ಹಂತದಲ್ಲಿ 9 ಆನೆಗಳು ಸಾಂಸ್ಕೃತಿಕ ನಗರಿಯತ್ತ ಹೆಜ್ಜೆ ಹಾಕಲಿವೆ.
ದಸರಾ ಆನೆಗಳ ಆಯ್ಕೆ ಸಂಬಂಧ ಮಂಗಳವಾರ ನಗರದ ಅರಣ್ಯ ಭವನದಲ್ಲಿ ನಡೆದ ಸಭೆಯಲ್ಲಿ 7 ಗಂಡಾನೆ ಹಾಗೂ 2 ಹೆಣ್ಣಾನೆಗಳನ್ನು ಮೊದಲ ಹಂತದ ಪಯಣಕ್ಕೆ ಆಯ್ಕೆ ಮಾಡಲಾಯಿತು. ನಾಗರಹೊಳೆಯ ಮತ್ತಿಗೋಡು, ಬಳ್ಳೆ, ಭೀಮನಕಟ್ಟೆ, ಮಡಿಕೇರಿ ವಿಭಾಗದ ದುಬಾರೆ, ಬಂಡೀಪುರದ ರಾಮಪುರ ಶಿಬಿರಗಳಿಂದ ಈ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಎರಡನೇ ಹಂತದಲ್ಲಿ 5 ಆನೆಗಳನ್ನು ಕರೆತರುವ ಯೋಚನೆ ಇದ್ದು, ಇನ್ನೂ ಅಂತಿಮಗೊಂಡಿಲ್ಲ.
ಸಭೆಯಲ್ಲಿ ಹುಲಿ ಯೋಜನೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ವಿ. ರಂಗರಾವ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರಾ, ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ, ವನ್ಯಜೀವಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಪಾಲ್ಗೊಂಡಿದ್ದರು.
ಆಯ್ಕೆಯಾದವು: ಗಂಡಾನೆಗಳಾದ ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ಧಜಂಜಯ, ಗೋಪಿ, ಪಾರ್ಥಸಾರಥಿ ಹಾಗೂ ಹೆಣ್ಣಾನೆಗಳಾದ ವಿಜಯ ಹಾಗೂ ವರಲಕ್ಷ್ಮಿ ಆಯ್ಕೆಯಾಗಿವೆ.
ಮೊದಲ ತಂಡದಲ್ಲಿ ಇರುವ ಆನೆಗಳ ಪೈಕಿ ಅಭಿಮನ್ಯು ಅನುಭವಿ ಆನೆಯಾಗಿದೆ. 5,000–5300 ಕೆ.ಜಿ ತೂಕವಿರುವ ಈ ಆನೆ ಕಳೆದ 20 ವರ್ಷದಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಇದನ್ನು ಸೆರೆ ಹಿಡಿಯಲಾಗಿತ್ತು.
ಮಹಿಳಾ ಆನೆಗಳ ಪೈಕಿ ವಿಜಯಾ ಆನೆಯು 3,250–3300 ತೂಕವಿದ್ದು, ಸಾಧು ಸ್ವಭಾವದ ಇದನ್ನು 1963ರಲ್ಲಿ ದುಬಾರೆಯಲ್ಲಿ ಸೆರೆ ಹಿಡಿಯಲಾಯಿತು. 11 ವರ್ಷಗಳಿಂದ ದಸರೆಯಲ್ಲಿ ಪಾಲ್ಗೊಳ್ಳುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.