ಮೈಸೂರು: ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಆಗ್ರಹಿಸಿ, ವಿವಿಧ ಕನ್ನಡ ಪರ ಸಂಘಟನೆಗಳು ಗುರುವಾರ (ಫೆ.13) ’ಕರ್ನಾಟಕ ಬಂದ್’ಗೆ ಕರೆ ನೀಡಿದ್ದು, ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಬಂದ್ ಆಚರಣೆ ಕೆಲವೇ ಸಂಘಟನೆಗಳ ಪ್ರತಿಭಟನೆಗೆ ಸೀಮಿತವಾಗಲಿದೆ.
ಖಾಸಗಿ ಟ್ಯಾಕ್ಸಿ, ಬಸ್ ಸಂಘಟನೆಗಳು, ರೈತ ಸಂಘಟನೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿವೆ.
‘ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ಗುರುವಾರ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಸೂಚನೆಯನುಸಾರ ಇಂಗ್ಲಿಷ್ ಪರೀಕ್ಷೆ ನಿಗದಿತ ಸಮಯಕ್ಕೆ ಆಯಾ ಕಾಲೇಜುಗಳಲ್ಲಿ ನಡೆಯಲಿದೆ’ ಎಂದು ಡಿಡಿಪಿಯು ನಾಗರತ್ನಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಂದ್ ಅಂಗವಾಗಿ ಶಾಲೆಗಳಿಗೆ ರಜೆ ಘೋಷಿಸಿಲ್ಲ. ಎಂದಿನಂತೆ ಶಾಲೆಗಳು ನಡೆಯಲಿವೆ’ ಎಂದು ಡಿಡಿಪಿಐ ಡಾ.ಪಾಂಡುರಂಗ ತಿಳಿಸಿದರೆ, ಮೈಸೂರು ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಿಲ್ಲ ಎಂದು ಕುಲಪತಿ ಪ್ರೊ.ಆರ್.ಶಿವಪ್ಪ ಹೇಳಿದರು.
‘ಬಂದ್ ಆಚರಣೆಗೆ ನಗರದಲ್ಲಿ ಅನುಮತಿ ನೀಡಿಲ್ಲ. ಯಾವೊಂದು ಸಂಘಟನೆಯೂ ಪ್ರತಿಭಟನೆಗೆ ಅನುಮತಿ ಪಡೆದಿಲ್ಲ. ಮೂರ್ನಾಲ್ಕು ಮಂದಿ ಮೊಬೈಲ್ಗೆ ಕರೆ ಮಾಡಿ ಜಿಲ್ಲಾಧಿಕಾರಿಗೆ ಮನವಿ ನೀಡುವುದಾಗಿ ತಿಳಿಸಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದರು.
‘ಜಿಲ್ಲೆಯ ಯಾವೊಂದು ಭಾಗದಲ್ಲೂ ಬಂದ್ಗೆ ಅನುಮತಿ ಕೊಟ್ಟಿಲ್ಲ. ಪ್ರತಿಭಟನೆಗೆ ಸಹ ಯಾವೊಂದು ಸಂಘಟನೆಯೂ ಅನುಮತಿಗೆ ಅರ್ಜಿ ಕೊಟ್ಟಿಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಪ್ರತಿಕ್ರಿಯಿಸಿದರು.