ಕೆ.ಆರ್.ನಗರ: ತಾಲ್ಲೂಕಿನ ಬಾಲೂರು ಗ್ರಾಮದ ಯುವಕ ಪುನೀತ್ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪಟ್ಟಣದ ತಾಲ್ಲೂಕು ಆಡಳಿತ ಸೌಧದ ಎದುರು ಮಂಗಳವಾರ ಪ್ರತಿಭಟಿಸಿದರು.
ಇಲ್ಲಿನ ಆದಿಶಕ್ತಿ ತೋಪಮ್ಮನವರ ದೇವಸ್ಥಾನ ಬಳಿ ಜಮಾವಣೆಗೊಂಡ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಮೈಸೂರು–ಹಾಸನ ರಸ್ತೆ, ಅಂಬೇಡ್ಕರ್ ವೃತ್ತ, ಗರುಡಗಂಬ ವೃತ್ತ, ಪುರಸಭೆ ವೃತ್ತದ ಮೂಲಕ ತಾಲ್ಲೂಕು ಆಡಳಿತ ಸೌಧದವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಬಜರಂಗದಳ (ಗ್ರಾಮಾಂತರ) ಜಿಲ್ಲಾ ಸಂಯೋಜಕ ಚಂದ್ರಮೌಳಿ ಮಾತನಾಡಿ, ‘ತಾಲ್ಲೂಕಿನ ಬಾಲೂರಿನ ಲೇಟ್ ಕೃಷ್ಣೇಗೌಡ ಅವರ ಪುತ್ರ ಪುನೀತ್ (21) ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ರಜೆಗಾಗಿ ಊರಿಗೆ ಬಂದಾಗ ಮಾರ್ಚ್ 12ರಂದು ಪಟ್ಟಣದಲ್ಲಿ ಅನ್ಯ ಧರ್ಮದ ಯುವಕರು ಹಲ್ಲೆ ಮಾಡಿದ್ದರು. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಗೆ ನೀಡಿದ್ದ ದೂರು ಹಿಂಪಡೆಯುವಂತೆ ಬೆದರಿಕೆ ಕೂಡ ಹಾಕಿದ್ದರು. ಮಾರ್ಚ್ 13ರಂದು ಬಾಲೂರಿನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪುನೀತ್ ಅವರ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಅಲ್ಲ, ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ. ಘಟನೆಯ ಬಗ್ಗೆ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮೃತ ಪುನೀತ್ ಅವರ ತಾಯಿ ಭಾರತಿ, ಬಜರಂಗದಳ (ಗ್ರಾಮಾಂತರ) ಜಿಲ್ಲಾ ಸಹ ಸಂಯೋಜಕರಾದ ವಿನಯ್ ಶೆಟ್ಟಿ, ಮಧು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಬೈಲಕುಪ್ಪೆ ಸೋಮಣ್ಣ, ಮೈಸೂರು ವಿಭಾಗದ ಸಂಯೋಜಕ ಮಂಡ್ಯ ಬಸವರಾಜು, ಬಿಜೆಪಿ ಮಂಡಲ ಅಧ್ಯಕ್ಷ ಧರ್ಮ ಭಾಗವಹಿಸಿದ್ದರು.