ನಂಜನಗೂಡು: ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟಕರಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರು ಶನಿವಾರ ಕುಟುಂಬ ಸಮೇತರಾಗಿ ತಾಲ್ಲೂಕಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು.
ಮಠದ ವತಿಯಿಂದ ಸ್ವಾಗತಿಸಲಾಯಿತು. ನಂತರ ಶಿವರಾತ್ರಿ ಶಿವಯೋಗಿಗಳ ಗದ್ದುಗೆ ದರ್ಶನ ಪಡೆದ ಬಳಿಕ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದರು.
ಮಹಾಲಯ ಅಮಾವಾಸ್ಯೆ ಅಂಗವಾಗಿ ಮಠಕ್ಕೆ ಆಗಮಿಸಿದ ಭಕ್ತರು ಹಾಗೂ ಶ್ರೀಗಳ ಸಮ್ಮುಖದಲ್ಲಿ ಹಂಸಲೇಖ ಅವರ ಪತ್ನಿ ಲತಾ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹಂಸಲೇಖ ಕೀಬೋರ್ಡ್ ನುಡಿಸಿ ಸಾಥ್ ನೀಡಿದರು.
ಸುದ್ದಿಗಾರರೊಂದಿಗೆ ಹಂಸಲೇಖ ಮಾತನಾಡಿ, ‘ಬಹಳಷ್ಟು ಸಾಧಕರು ತೆರೆಮರೆಯಲ್ಲಿದ್ದಾರೆ. ನಾಡಹಬ್ಬ ದಸರಾ ಉದ್ಘಾಟನೆಗೆ ಅವಕಾಶ ಸಿಕ್ಕಿರುವುದು ಅನಿರೀಕ್ಷಿತವಾದರೂ, ಸಂತಸದ ವಿಚಾರ’ ಎಂದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹಂಸಲೇಖ ಕುಟುಂಬದವರನ್ನು ಆಶೀರ್ವದಿಸಿ ಗೌರವಿಸಿದರು.