ಹುಣಸೂರು: ‘ರಾಜ್ಯದಲ್ಲಿ ಜಿಹಾದಿ ಸಂಸ್ಕೃತಿ ಇರುವ ಪ್ರದೇಶದಲ್ಲಿ ಹಿಂದೂ ಯುವಕರ ಕೊಲೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನಿರಂತರವಾಗಿ ನಡೆದಿದ್ದು, ಈ ಬಗ್ಗೆ ಗೃಹ ಸಚಿವಾಲಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು’ ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ವಿರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಅವರು, ಈಚೆಗೆ ಕೊಲೆಯಾಗಿದ್ದ ತಾಲ್ಲೂಕಿನ ದಾಸನಪುರದ ಮುತ್ತುರಾಜ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಮಾತನಾಡಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಂ ಸಮುದಾಯದ ಕೆಲವು ಜಿಹಾದಿ ಮನಸ್ಥಿತಿಯುಳ್ಳ ಯುವಕರಿಂದ ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಮುಸ್ಲಿಂ ಸಮಾಜಕ್ಕೆ ಸೇರಿಸಿಕೊಳ್ಳುವ ಕೆಲಸ ನಿರಂತರವಾಗಿ ನಡೆದಿದೆ. ಇಂಥ ನಡೆ ಬಗ್ಗೆ ಪೊಲೀಸ್ ಇಲಾಖೆ ಎಚ್ಚರವಹಿಸಿ ತಪ್ಪಿತಸ್ಥರಿಗೆ ಗಂಭೀರ ಶಿಕ್ಷೆ ನೀಡುವುದರಿಂದ ಹತೋಟಿಗೆ ತರಬೇಕು’ ಎಂದರು.
‘ಹುಣಸೂರಿನ ಮುತ್ತುರಾಜ್, ಕೆ.ಆರ್.ನಗರದ ಪುನೀತ್ ಸಾವಿನ ಪ್ರಕರಣದ ಹಿಂದೆ ಜಿಹಾದ್ ಕೈವಾಡವಿದ್ದು, ತನಿಖೆ ಚುರುಕುಗೊಳಿಸಿ ನೊಂದ ಕುಟುಂಬಕ್ಕೆ ನ್ಯಾಯಕೊಡಿಸುವ ಕೆಲಸವಾಗಬೇಕು’ ಎಂದು ಆಗ್ರಹಿಸಿದರು.
ಮುತಾಲಿಕ್ ಭೇಟಿ ಸಮಯದಲ್ಲಿ ಭಜರಂಗ ದಳದ ಮುಖಂಡರು ಮತ್ತು ವಿಶ್ವ ಹಿಂದೂ ಪರಿಷತ್ ಸದಸ್ಯರು ಹಾಗೂ ಪ್ರಮುಖರಾದ ಸಂಜಯ್, ಮಲ್ಲಪ್ಪ, ಚಂದ್ರಮೌಳಿ ವಿ.ಎನ್.ದಾಸ್ ಇದ್ದರು.
‘ಎರಡನೇ ಭಟ್ಕಳ ಆಗಲಿದೆ’
‘ಜಿಲ್ಲೆಯಲ್ಲಿ ಹುಣಸೂರು ಅತಿ ವೇಗವಾಗಿ ಬೆಳೆಯುತ್ತಿದ್ದು ಕೇರಳ ರಾಜ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕವಿರುವುದರಿಂದ ಈ ರೀತಿಯ ಕೃತ್ಯಗಳನ್ನು ನಡೆಸಿದ ಮುಸ್ಲಿಂ ಯುವಕರು ತಲೆಮರೆಸಿಕೊಳ್ಳಲು ಅವಕಾಶವಿದೆ. ಹುಣಸೂರು ರಾಜ್ಯದಲ್ಲಿ ಎರಡನೇ ಭಟ್ಕಳ ಆಗುವ ಆತಂಕವಿದೆ’ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.