ಮೈಸೂರು: ‘ದೇವರಲ್ಲಿ ನಾವು ಕೇವಲ ಲೌಕಿಕ ಸಂಪತ್ತನ್ನು ಬೇಡಬಾರದು. ಭಕ್ತಿ, ಜ್ಞಾನವನ್ನು ಬೇಡಿದರೆ ಜೀವನ ಪೂರ್ಣ ಬೆಳಕಾಗಿ ಮುಕ್ತಿ ದೊರಕುತ್ತದೆ’ ಎಂದು ಭಂಡಾರಕೇರಿ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ನಗರದ ರಾಮಸ್ವಾಮಿ ವೃತ್ತದಲ್ಲಿರುವ ವೆಂಕಟಾಚಲಧಾಮದಲ್ಲಿ ಬುಧವಾರ ಹಮ್ಮಿಕೊಂಡಿದ 13ನೇ ಸಂವತ್ಸರೋತ್ಸವದಲ್ಲಿ ವೆಂಕಟಾಚಲ ಸ್ವಾಮಿ ಮತ್ತು ರಾಘವೇಂದ್ರ ಸ್ವಾಮಿ ಬೃಂದಾವನಕ್ಕೆ ವಿಶೇಷ ಪೂಜೆ ಸಮರ್ಪಿಸಿ ಅವರು ಮಾತನಾಡಿದರು.
‘ಹಣ, ಕಾರು, ಮನೆ ಮತ್ತಿತರ ವರಗಳನ್ನು ನೀಡು ಎಂದು ದೇವರಲ್ಲಿ ಬೇಡುವವರೇ ಹೆಚ್ಚು. ಆದರೆ, ಸಭ್ಯನಾಗಿ ಬದುಕಲು ಜ್ಞಾನ ಬೇಕು. ಅದನ್ನು ಕೊಡುವಂತೆ ಪ್ರಾರ್ಥಿಸುವವರ ಸಂಖ್ಯೆ ಹೆಚ್ಚಾಗಲಿ’ ಎಂದು ಆಶಿಸಿದರು.
ವೇಂಕಟಾಚಲ ಧಾಮದಲ್ಲಿ ಬುಧವಾರ ಬೆಳಿಗ್ಗೆ 50 ಕಲಶಾರಾಧನೆ ನಂತರ ವೆಂಕಟೇಶ ದೇವರಿಗೆ ಕಲಶಾಭಿಷೇಕ ಮತ್ತು ವಿವಿಧ ಹೋಮಗಳು ನಡೆದವು. ಶ್ರೀಗಳು ಸಂಸ್ಥಾನ ಪ್ರತಿಮೆಗಳಿಗೆ ವಿಶೇಷ ಪೂಜೆ ನೆರವೇರಿಸಿದರು. ರಾಘವೇಂದ್ರ ಸ್ವಾಮಿ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಭಾಗವತಾಶ್ರಮ ಪ್ರತಿಷ್ಠಾನದ ಟ್ರಸ್ಟಿ ರವೀಂದ್ರ, ದೇಗುಲದ ಪ್ರಧಾನ ಅರ್ಚಕ ರಾಘವೇಂದ್ರ, ವೇದ ವಿದ್ವಾಂಸ ಕೃಷ್ಣಕುಮಾರ ಆಚಾರ್, ಗಿರೀಶ ಆಚಾರ್ ಮತ್ತು ವ್ಯವಸ್ಥಾಪಕ ರಾಘಣ್ಣ ಹಾಜರಿದ್ದರು.