ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಹೆಚ್ಚಿಸಲು ಕಸರತ್ತು

ಸ್ವೀಪ್‌ ಸಮಿತಿ ಚಟುವಟಿಕೆ ಚುರುಕು; ನಗರ ಮತದಾರರತ್ತ ಚಿತ್ತ
Published 22 ಮಾರ್ಚ್ 2024, 6:41 IST
Last Updated 22 ಮಾರ್ಚ್ 2024, 6:41 IST
ಅಕ್ಷರ ಗಾತ್ರ

ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಿ ದಾಖಲೆ ಬರೆಯಲು ‘ಜಿಲ್ಲಾ ಮತದಾರರ ಜಾಗೃತಿ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ ಸಮಿತಿ’ಯು (ಸ್ವೀಪ್‌) ಬಿರುಸಿನಿಂದ ಚಟುವಟಿಕೆ ಆರಂಭಿಸಿದೆ.

ಕ್ಷೇತ್ರದಲ್ಲಿ ಒಟ್ಟು 17 ಸಾರ್ವತ್ರಿಕ ಚುನಾವಣೆಗಳು ನಡೆದಿದ್ದು, ಆ ಪೈಕಿ, 2019ರಲ್ಲಿ ಒಟ್ಟು ಶೇ 70.39ರಷ್ಟು ಮತದಾರರು ಮತ ಚಲಾಯಿಸಿ ಗರಿಷ್ಠ ಪ್ರಮಾಣದ ಮತದಾನದ ದಾಖಲೆ ಬರೆದಿದ್ದಾರೆ. ಅದಕ್ಕೂ ಮುನ್ನ, 1989ರಲ್ಲಿ ಶೇ 69.74ರಷ್ಟು ಮತದಾನವಾಗಿರುವುದೇ ದಾಖಲೆಯಾಗಿತ್ತು. ಕಳೆದ ಎರಡು ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಗಣನೀಯವಾಗಿ ಹೆಚ್ಚಿದೆ.

ಮೈಸೂರು ಜಿಲ್ಲೆಯಲ್ಲಿ ಒಟ್ಟು 2,915 ಮತಗಟ್ಟೆಗಳಿದ್ದು, 1,314 ಮತಗಟ್ಟೆಗಳು ಜಿಲ್ಲೆಯ ಮತದಾನ ಪ್ರಮಾಣಕ್ಕಿಂತ ಕಡಿಮೆ ಸರಾಸರಿ ಹೊಂದಿವೆ. ಇವುಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಜಾಗೃತಿ ಚಟುವಟಿಕೆಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಲು ಸ್ವೀಪ್‌ ಸಮಿತಿಯು ಮುಂದಾಗಿದೆ.

ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ: ನಗರದ ಪ್ರಮುಖ ವೃತ್ತಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯ ಘೋಷವಾಕ್ಯವಾದ ‘ಚುನಾವಣಾ ಪರ್ವ; ದೇಶದ ಗರ್ವ’ ಹೇಳಿಕೆಯನ್ನು ವಿದ್ಯುತ್‌ ದೀಪಗಳ ಅಲಂಕಾರದ ಮೂಲಕ ಬಿಂಬಿಸಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಸ್ವೀಪ್‌ ಸಮಿತಿಯು ಸೆಸ್ಕ್ ಜೊತೆ ಮಾತುಕತೆ ನಡೆಸಿದೆ. ನಗರದ ನಾಲ್ಕು ಪ್ರಮುಖ ವೃತ್ತಗಳಲ್ಲಿ ಈ ಘೋಷವಾಕ್ಯವು ಮೂಡಿಬರಲಿದೆ. ಜೊತೆಗೆ ‘ಏಪ್ರಿಲ್‌ 26– ತಪ್ಪದೇ ಮತದಾನ ಮಾಡಿ’ ಎನ್ನುವ ನೆನಪಿನೋಲೆಯೂ ಇರಲಿದೆ.

ಎಂದಿನಂತೆ ವಿಂಟೇಜ್‌ ಕಾರು ಹಾಗೂ ಬೈಕುಗಳ ರ್‍ಯಾಲಿ ಇರಲಿದೆ. ಜೊತೆಗೆ ಅಲ್ಲಲ್ಲಿ ಸೆಲ್ಫಿ ಬೂತ್‌ಗಳು ತಲೆ ಎತ್ತಲಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೂ ಜಾಗೃತಿ ಸಂದೇಶಗಳು ಮೂಡಿಬರಲಿದ್ದು, ಈ ಸಂಬಂಧ ಮಾತುಕತೆ ನಡೆದಿದೆ.

‘ಕಳೆದ ಚುನಾವಣೆಗಿಂತ ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಬೇಕು ಎನ್ನುವುದು ನಮ್ಮ ಗುರಿ. ಯುವಜನರು, ಹೊಸ ಮತದಾರರು, ಹಿರಿಯ ನಾಗರಿಕರು, ಅಂಗವಿಕಲರು, ಗಿರಿಜನರು, ಸೌಲಭ್ಯ ವಂಚಿತರು... ಹೀಗೆ ವಿವಿಧ ವರ್ಗಗಳ ಜನರನ್ನು ಕೇಂದ್ರವಾಗಿಸಿಕೊಂಡು ಚಟುವಟಿಕೆಗಳನ್ನು ರೂಪಿಸುತ್ತಿದ್ದೇವೆ’ ಎನ್ನುತ್ತಾರೆ ಸ್ವೀಪ್‌ ಸಮಿತಿಯ ಅಧಿಕಾರಿಗಳು.

ಐಕಾನ್‌ಗಳಿಂದ ಪ್ರಚಾರ: ಮತಗಟ್ಟೆಗೆ ಜನರನ್ನು ಸೆಳೆಯಲು ಮೇರು ವ್ಯಕ್ತಿತ್ವದ ಐಕಾನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಲ್ಲಿ ಖ್ಯಾತ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌, ವನ್ಯಜೀವಿ ತಜ್ಞರಾದ ಕೃಪಾಕರ– ಸೇನಾನಿ ಸೇರಿದಂತೆ ಹಲವರ ಹೆಸರುಗಳನ್ನು ಸ್ವೀಪ್‌ ಸಮಿತಿಯು ಆಯೋಗಕ್ಕೆ ಪ್ರಸ್ತಾವ ಸ‌ಲ್ಲಿಸಿದ್ದು, ಇನ್ನಷ್ಟೇ ಒಪ್ಪಿಗೆ ಸಿಗಬೇಕಿದೆ.

ನಗರ ಪ್ರದೇಶವೇ ಸವಾಲು

ಗ್ರಾಮೀಣ ಮತದಾರರಿಗೆ ಹೋಲಿಸಿದರೆ ನಗರ ಪ್ರದೇಶದಲ್ಲಿಯೇ ಮತದಾನದ ಪ್ರಮಾಣ ಕಡಿಮೆ ಇದೆ. ಮೈಸೂರಿನ ನರಸಿಂಹರಾಜ ಕೃಷ್ಣರಾಜ ಚಾಮರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇ 59–60ರ ಸರಾಸರಿಯಲ್ಲಿದೆ. ನಗರ ಮತದಾರರು ಲೋಕಸಭಾ ಚುನಾವಣೆಗಳಲ್ಲಿ ಮತದಾನಕ್ಕೆ ನಿರುತ್ಸಾಹ ತೋರುತ್ತಿದ್ದಾರೆ. ಇಲ್ಲಿನ ಮತದಾರರನ್ನು ಮತಗಟ್ಟೆಗಳತ್ತ ಸೆಳೆಯುವ ಸವಾಲು ಸ್ವೀಪ್‌ ಸಮಿತಿ ಮುಂದೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT