ಮೈಸೂರು: ದಟ್ಟ ದುರ್ವಾಸನೆಯ ಮಧ್ಯೆಯೇ ಮಂಗಳವಾರ ಶಾಸಕ ವಿ.ಎಸ್.ಉಗ್ರಪ್ಪ ಇಲ್ಲಿನ ಕೆ.ಆರ್.ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಒಂದು ಗಂಟೆಯಲ್ಲಿಯೇ ಅಲ್ಲಿನ ದುರ್ವಾಸನೆಯಿಂದ ತಲೆನೋವು ಬಂದಿತು. ಇನ್ನು ಇಲ್ಲಿನ ವಿದ್ಯಾರ್ಥಿನಿಯರು ಹೇಗಿರಬೇಕು ಎಂದು ಬೇಸರ ವ್ಯಕ್ತಪಡಿಸಿದರು.
‘ಹಾಸ್ಟೆಲ್ನ ಆವರಣದಲ್ಲೇ ಹರಿಯುತ್ತಿರುವ ದೊಡ್ಡ ಮೋರಿಯಿಂದ ದುರ್ವಾಸನೆ ಹೊಮ್ಮುತ್ತಿದೆ. ಇದನ್ನು ನಿವಾರಿಸುವ ಗೋಜಿಗೆ ಯಾರೂ ಹೋಗಿಲ್ಲ. ಹಾಸ್ಟೆಲ್ ಒಳಗೂ ಕಮಟು ವಾಸನೆ ಮೂಗಿಗೆ ಅಡರುತ್ತಿದೆ. ಇಷ್ಟು ದುರಾವಸ್ಥೆಯಲ್ಲಿ ವಿದ್ಯಾರ್ಥಿನಿಯರು ಹೇಗೆ ತಾನೇ ಇರಬೇಕು’ ಎಂದು ಪ್ರಶ್ನಿಸಿದರು.
ಹಾಸ್ಟೆಲ್ಗೆ ಬರುತ್ತಿರುವ ಅನುದಾನ ಕುರಿತು ಕೇಳಲಾದ ಪ್ರಶ್ನೆಗೆ ಪ್ರಾಂಶುಪಾಲರಾಗಲಿ, ವಾರ್ಡನ್ ಆಗಲಿ ಉತ್ತರಿಸಲಿಲ್ಲ. ಊಟದ ವೆಚ್ಚವನ್ನು ವಿದ್ಯಾರ್ಥಿನಿಯರೇ ಭರಿಸಬೇಕು ಎಂಬುದನ್ನು ಕೇಳಿ ಉಗ್ರಪ್ಪ ಆಶ್ಚರ್ಯ ವ್ಯಕ್ತಪಡಿಸಿದರು.
‘ನಿಮ್ಮ ಮಕ್ಕಳಾದರೆ ಇಂತಹ ಹಾಸ್ಟೆಲ್ನಲ್ಲಿ ಇರಿಸುತ್ತಿದ್ದೀರಾ’ ಎಂದು ಕಟುವಾಗಿ ಅಧಿಕಾರಿಗಳನ್ನು ಪ್ರಶ್ನಿಸಿದರು. ‘ವಿದ್ಯಾರ್ಥಿನಿಯರು ಬಟ್ಟೆ ಒಗೆಯುವ ಕಡೆ, ಸ್ನಾನದ ಮನೆ ಇರುವ ಕಡೆ ಸಿಸಿಟಿವಿ ಹಾಕಿದ್ದೀರಿ. ಅದೇ ಹಾಸ್ಟೆಲ್ ಹಿಂಬದಿ ಹಾಕಿಲ್ಲ. ಇದು ಎಷ್ಟು ಸರಿ’ ಎಂದು ತರಾಟೆಗೆ ತೆಗೆದುಕೊಂಡರು.
3 ವರ್ಷಗಳಿಂದ ಅನಾಮಿಕ ವ್ಯಕ್ತಿ ಹಾಸ್ಟೆಲ್ ಪ್ರವೇಶಿಸುತ್ತಿದ್ದಾನೆ ಎಂದು ವಿದ್ಯಾರ್ಥಿನಿಯರು ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿದ್ಯಾರ್ಥಿನಿಯರ ಬದುಕಿನ ಜತೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.
ವಿದ್ಯಾರ್ಥಿನಿಯರು ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎನಿಸಿದರೆ ‘ವಿ.ಎಸ್.ಉಗ್ರಪ್ಪ, ಶಾಸಕರ ಭವನ, ಬೆಂಗಳೂರು’ ವಿಳಾಸಕ್ಕೆ ಅಂಚೆ ಮೂಲಕ ತಿಳಿಸಬಹುದು. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಅಖಂಡ ಕರ್ನಾಟಕ ಉಳಿಯಬೇಕು. ಪ್ರತ್ಯೇಕತೆಯ ಕೂಗು ಸರಿಯಲ್ಲ. ಯಾವುದೇ ಪಕ್ಷದವರಾದರೂ ಇಂತಹ ಕೂಗಿಗೆ ಬೆಂಬಲ ನೀಡಿದರೆ ಅದನ್ನು ಖಂಡಿಸುತ್ತೇನೆ ಎಂದರು.