ಮೈಸೂರು: ವಿದ್ಯಾರ್ಥಿಗಳೇ ಆಗಲಿ, ಉದ್ಯೋಗಸ್ಥರೇ ಆಗಲಿ ಸಮರ್ಪಕವಾಗಿ ಒತ್ತಡ ನಿರ್ವಹಣೆ ಮಾಡಿದ್ದಲ್ಲಿ ಯಶಸ್ಸು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ವಿಭಾಗವು ಇಲ್ಲಿನ ಸೆನೆಟ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಯುವ ಸಬಲೀಕರಣ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಒತ್ತಡಗಳನ್ನು ನಿರ್ವಹಿಸುವ ಕೌಶಲಗಳನ್ನು ಕಲಿಯಬೇಕಿದೆ. ಪದವಿ ಮುಗಿದ ಬಳಿಕ ಉದ್ಯೋಗ ಸಿಕ್ಕಿತೆಂದು ಒಂದು ಕಡೆ ಸುಮ್ಮನೇ ಜಡವಾಗಿ ಕಾರ್ಯನಿರ್ವಹಿಸುವುದು ಸರಿಯಲ್ಲ. ಪ್ರತಿ ಉದ್ಯೋಗದಲ್ಲೂ ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕು. ಆಗ ಎದುರಾಗುವ ಒತ್ತಡಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಪದವಿ ಪಡೆಯುವುದಷ್ಟೇ ಗುರಿಯಾಗಬಾರದು. ಉದ್ಯೋಗ ಪಡೆಯುವ ಕೌಶಲಗಳನ್ನು ಪಡೆಯುವ ಕುರಿತು ಆಲೋಚಿಸಿ ಅಂತಹ ಕೌಶಲಗಳನ್ನು ಪಡೆಯಬೇಕು ಎಂದರು.
ಪಿಎಸ್ಎಸ್ಎಂ ಗ್ಲೋಬಲ್ ಕಂಪನಿಯ ಸಂಸ್ಥಾಪಕಿ ಪಾರಿ ಪತ್ರಿ ಅವರು ‘ಒತ್ತಡ ನಿರ್ವಹಣೆ ಹಾಗೂ ಮೆಡಿಟೇಷನ್’ ಕುರಿತು ಉಪನ್ಯಾಸ ನೀಡಿದರು.
ಕುಲಸಚಿವ ಆರ್.ಶಿವಪ್ಪ, ಓಬಿಸಿ ಸೆಲ್ ಸಂಯೋಜಕ ಡಾ.ಬಿ.ವಿ.ಸುರೇಶ್ಕುಮಾರ್ ಹಾಗೂ ಕಾರ್ಯಾಗಾರದ ಸಂಯೋಜಕಿ ಡಾ.ನವಿತಾ ತಿಮ್ಮಯ್ಯ ಇದ್ದರು.