ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ: ರೂ. 46.25 ಲಕ್ಷ ಉಳಿತಾಯ ಬಜೆಟ್‌

Last Updated 1 ಮಾರ್ಚ್ 2014, 5:57 IST
ಅಕ್ಷರ ಗಾತ್ರ

ರಾಯಚೂರು:  ನಗರಸಭೆಯ 2014–15ನೇ ಸಾಲಿನ ಒಟ್ಟು ₨6899.75 ಲಕ್ಷ ಗಳಲ್ಲಿ ವಿವಿಧ ಯೋಜನೆಗಾಗಿ ₨6853.50 ಲಕ್ಷ ವೆಚ್ಚ ಮಾಡಲು ಯೋಜಿಸಲಾಗಿದೆ. ಈ ಬಜೆಟ್‌ನಲ್ಲಿ ₨46.25 ಲಕ್ಷಗಳ ಉಳಿತಾಯ ಬಜೆಟ್‌ ಆಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ನರಸಪ್ಪ ಯಕ್ಲಾಸಪುರ ಹೇಳಿದರು.

ಇಲ್ಲಿನ ಸಾರ್ವಜನಿಕ ಉದ್ಯಾನದಲ್ಲಿ ಶುಕ್ರವಾರ ನಡೆದ ರಾಯಚೂರು ನಗರಸಭೆಯ 2014–15ನೇ ಸಾಲಿನ ಬಜೆಟ್‌ನ್ನು ಮಂಡಿಸಿದರು.
ನಗರಕ್ಕೆ ನಿರಂತರ ಕುಡಿಯುವ ನೀರಿನ 24X7 ಯೋಜನೆ ಅಡಿ ₨ 67 ಕೋಟಿ ವೆಚ್ಚದಲ್ಲಿ ಕಾಮಗಾರಿಗಾಗಿ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಈ ಯೋಜನೆಗೆ ನಗರಸಭೆಯಿಂದ ₨ 10 ಕೋಟಿ ವಂತಿಕೆ ನೀಡಬೇಕಾಗಿದೆ. ಎರಡು ನದಿಗಳ ಮಧ್ಯೆ ರಾಯಚೂರು ನಗರ ಇದ್ದರೂ, ಬೇಸಿಗೆಯಲ್ಲಿ ಸಮಸ್ಯೆ ಎದುರಿಸಲಾಗುತ್ತಿದೆ. ಈ ಯೋಜನೆ ಮಂಜೂರಾತಿ ಅನುಷ್ಠಾನದಿಂದ ಕುಡಿಯುವ ನೀರಿನ ಶಾಶ್ವತ ಪರಿಹಾರ ದೊರಕಲಿದೆ ಎಂದು ತಿಳಿಸಿದರು.

ಈ ಬಜೆಟ್‌ನಲ್ಲಿ ₨ 2.60ಕೋಟಿ ಹಣವನ್ನು ನೈರ್ಮಲೀಕರಣ ಮತ್ತು ತ್ಯಾಜ್ಯ ವಸ್ತು ನಿರ್ವಹಣೆ ಲ್ಯಾಂಡ್‌ ಫಿಲ್ ಸೈಟ್‌ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಯಕ್ಲಾಸಪುರ ವಲಯದ ಒಳಚರಂಡಿ ಉಳಿದ ಕೆಲಸಕ್ಕೆ ₨ 37.94 ಕೋಟಿ ಹಾಗೂ ಹೊಸೂರು ವಲಯದ ಒಳಚರಂಡಿ ಕಾಮಗಾರಿಗಾಗಿ ₨ 31.60ಕೋಟಿಗಳ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದು ವಿವರಿಸಿದರು.

ಪ್ರಸಕ್ತ ಸಾಲಿನಲ್ಲಿ ನಗರಸಭೆ ಕಂದಾಯ ತೆರಿಗೆ ಸೇರಿದಂತೆ ಇತರ ಮೂಲಗಳಿಂದ ₨ 41.29ಕೋಟಿ ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ. ನಗರದ 20 ಸಾವಿರ ಒಎಲ್‌ (ಒತ್ತುವರಿ ಭೂಮಿ) ಆಸ್ತಿಗಳನ್ನು  ದಾಖಲೆಗಳಲ್ಲಿ ನೋಂದಾಯಿಸಿಕೊಂಡು ಅವರ ಆಸ್ತಿಗೆ ಭದ್ರತೆ ನೀಡುವುದರಿಂದ ಆಸ್ತಿ ತೆರಿಗೆ ಹಳೆ ಬಾಕಿ ಸೇರಿದಂತೆ ಈ ವರ್ಷ ಹೆಚ್ಚುವರಿಯಾಗಿ ಒಂದು ಕೋಟಿ ಆಸ್ತಿ ತೆರಿಗೆ ಜಮೆಗಾಗಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

₨ 1ಕೋಟಿ ವೆಚ್ಚದಲ್ಲಿ ಮಹಿಳಾ ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತದೆ. ₨15ಲಕ್ಷ ವೆಚ್ಚದಲ್ಲಿ ತೀನ್‌ಕಂದೀಲ್‌ ವೃತ್ತದಲ್ಲಿರುವ ಕಲ್ಲಾನೆ ಸೌಂದರೀಕರಣಕ್ಕಾಗಿ ಕ್ರಮ ತೆಗೆದುಕೊಳ್ಳಲಾಗುವುದು. 13ಕೋಟಿ ನಗರದ ಮುಖ್ಯ ರಸ್ತೆಗಳ ಡಾಂಬರೀಕರಣ ಹಾಗೂ ರಸ್ತೆ ಬದಿಯ ಕಾಲುವೆಗಳ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ₨ 1.50ಕೋಟಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ನಗರಸಭೆ ಪ್ರಭಾರ ಅಧ್ಯಕ್ಷೆ  ಪದ್ಮಾಜಿಂದಪ್ಪ, ಪೌರಾಯುಕ್ತ ಬಸಪ್ಪ, ಸದಸ್ಯರಾದ ಎ.ಮಾರೆಪ್ಪ, ಜಯಣ್ಣ, ದೊಡ್ಡ ಮಲ್ಲೇಶ, ಮಹಾಲಿಂಗ ರಾಂಪುರ,ಈಶಪ್ಪ, ಪಿ.ಯಲ್ಲಪ್ಪ, ಸಿಮಾ ಖಾಜಾ ಮೋಹಿನುದ್ದೀನ್‌ ಸೇರಿದಂತೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.

‘ಬಜೆಟ್ ಅಂಶಗಳೇ ಅರ್ಥವಾಗಿಲ್ಲ’
ನಗರಸಭೆ ಮಂಡಿಸಿದ ಅಯ–ವ್ಯಯಯಲ್ಲಿ ತಮ್ಮಗೆ ಯಾವುದೇ ವಿಷಯ ಅರ್ಥವಾಗಿಲ್ಲ. ಬಜೆಟ್‌ ಮೇಲಿನ ಚರ್ಚೆ ಮಾಡಲು ಹೇಗೆ ಸಾಧ್ಯ ಎಂದು ನಗರಸಭೆ ಸದಸ್ಯೆ ಸಿಮಾಖಾಜಾ ಮೋಹಿನುದ್ದಿನ್ ಬಜೆಟ್‌ ಮೇಲಿನ ಚರ್ಚೆ ಸಂದರ್ಭದಲ್ಲಿ ಹೇಳಿಸಿದರು.

ಬಜೆಟ್‌ ಪುಸ್ತಕದಲ್ಲಿನ ಅಂಶಗಳನ್ನು ಇಂಗ್ಲಿಷ್‌ನಲ್ಲಿ  ಮುದ್ರಿಸಲಾಗಿದೆ. ನಮ್ಮಗೆ ಹೇಗೆ ತಿಳಿಯಬೇಕು. ಬಜೆಟ್‌ ಬಗ್ಗೆ ಮುಂಚಿತವಾಗಿವೇ ಸದಸ್ಯರಿಗೆ ಮಾಹಿತಿ ನೀಡಬೇಕು. ಎಲ್ಲ ಅಂಶಗಳ ಕುರಿತು ವಿವರಿಸಿದರೆ ಮಾತ್ರ ಸದಸ್ಯರು ಚರ್ಚೆ ಮಾಡಲು ಸಾಧ್ಯವಾಗುತ್ತದೆ. ಎಲ್ಲ ವಿಷಯಗಳ ಬಗ್ಗೆ ಸದಸ್ಯರಿಗೆ ಸೂಕ್ತ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಬೇಕು  ಎಂದು ಆಗ್ರಹಿಸಿದರು.

ಮಹಾಲಿಂಗ ರಾಂಪುರ, ಹಾಗೂ ಸದಸ್ಯ ದೊಡ್ಡ ಮಲ್ಲೇಶ  ಸದಸ್ಯ ಮಹೆಬೂಬ್ ಬಜೆಟ್‌ ಅಂಶಗಳು ಪೂರಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ಸದಸ್ಯರಾದ  ಜಯಣ್ಣ, ಎ.ಮಾರೆಪ್ಪ ವಕೀಲ ಮಾತನಾಡಿ,  ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟರೆ ಸಾಲದು. ಸದ್ಬಳಕೆ ಮಾಡಲು ಮುಂದಾಗಬೇಕು ಎಂದರು.

ನಗರಸಭೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಗೊತ್ತುವಳಿ ಮಂಡಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸೂಕ್ತ ಕ್ರಮವನ್ನು ಪೌರಾಯುಕ್ತರು  ತೆಗೆದುಕೊಳ್ಳಬೇಕು ಎಂದು ಪಿ,ಯಲ್ಲಪ್ಪ ಹೇಳಿದರು.

ಬಜೆಟ್‌ ಪೂರ್ವ ಮಾಹಿತಿಗೆ ಅಧ್ಯಕ್ಷರಿಗೆ ಒತ್ತಾಯ
ಪ್ರಥಮ ಬಾರಿಗೆ ಆಯ್ಕೆಗೊಂಡಿರುವ ನಮ್ಮಂಥ ಸದಸ್ಯರಿಗೆ ಬಜೆಟ್‌ ಪೂರ್ವದಲ್ಲಿ ಮಾಹಿತಿ ನೀಡಬೇಕು. ಇದು ಸದಸ್ಯರಿಗೆ ಆಗುತ್ತಿರುವ ತೊಂದರೆ. ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಹರೀಶ ನಾಡಗೌಡ  ಒತ್ತಾಯಿಸಿದರು.

ತೆರಿಗೆ ಪಾವತಿಗೆ ವಾರ್ಡ್‌ ಜನರು ಮುಂದೆ ಬಂದರೂ ನಗರಸಭೆ ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪೂರ್ಣವಾಗಿ ನಿರ್ಲಕ್ಷ್ಯಿಸುತ್ತಿದ್ದಾರೆ. ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಲು ಅಧ್ಯಕ್ಷರು ಹಾಗೂ ಪೌರಾಯುಕ್ತರು ಮುಂದಾಗಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT